ಐಪಿಎಲ್ 2026ನೇ ಆವೃತ್ತಿಯನ್ನು ಅದ್ಭುತವಾಗಿ ಆರಂಭಿಸಿದ್ದ ಪಂಜಾಬ್ ಕಿಂಗ್ಸ್ (PBKS) ತಂಡವು ಇದೀಗ ಸತತ ಐದು ಸೋಲುಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಐಪಿಎಲ್ 2025ರ ರನ್ನರ್-ಅಪ್ ಆಗಿದ್ದ ತಂಡವು 13 ಅಂಕಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದಷ್ಟು ಬೇಗ ಪ್ಲೇಆಫ್ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ, ಅದರ ನಂತರ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡು ಪ್ಲೇಆಫ್ ಹಾದಿಯಲ್ಲಿ ಮುಗ್ಗರಿಸಿದೆ. ಪ್ಲೇಆಫ್ಗೆ ಅರ್ಹತೆ ಪಡೆಯಲು ಇದೀಗ ಮುಂದಿನ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿರುವ ಸಂಕಷ್ಟಕ್ಕೆ ಸಿಲುಕಿದೆ. ಮುಂದಿರುವ ಎರಡು ಪಂದ್ಯಗಳಲ್ಲಿ ಕೊನೆಯದು ಧರ್ಮಶಾಲಾದ ಅವರ ಎರಡನೇ 'ತವರು' ಸ್ಥಳದಲ್ಲಿ ನಡೆಯಲಿದೆ. ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ರವಿಚಂದ್ರನ್ ಅಶ್ವಿನ್, ತವರು ಸ್ಥಳಗಳನ್ನು ಬದಲಿಸುವ ನಿಲುವು ತಂಡಕ್ಕೆ ಉತ್ತಮವಾಗಿಲ್ಲ ಎಂದು ಹೇಳಿದರು.
'ಕೆಕೆಆರ್, ಸಿಎಸ್ಕೆ ಮತ್ತು ಮುಂಬೈ ತಂಡಗಳನ್ನು ನೋಡಿ, ಈ ಮೂರು ತಂಡಗಳು ಹಲವು ಟ್ರೋಫಿಗಳನ್ನು ಗೆದ್ದಿವೆ. 19 ಸೀಸನ್ಗಳಲ್ಲಿ, ಆ ಮೂರು ತಂಡಗಳೇ 13 ಬಾರಿ ಟ್ರೋಫಿ ತನ್ನದಾಗಿಸಿಕೊಂಡಿವೆ. ಎಸ್ಆರ್ಎಚ್ ಮತ್ತು ಡೆಕ್ಕನ್ ಚಾರ್ಜರ್ಸ್ ಎರಡರಲ್ಲಿ ಗೆದ್ದಿವೆ. ಈ ತಂಡಗಳು ಎಂದಾದರೂ ತಮ್ಮ ತವರು ಸ್ಥಳಗಳನ್ನು ಬದಲಾಯಿಸಿವೆಯೇ?' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಶ್ನಿಸಿದ್ದಾರೆ.
'ಸದ್ಯಕ್ಕೆ ಹೊರಗಿನಿಂದ ನೋಡಿದರೆ ಪಂಜಾಬ್ ತಂಡ ಚೆನ್ನಾಗಿ ಆಡುತ್ತಿಲ್ಲ ಎಂದು ಹೇಳಬಹುದು. ಆದರೆ, ನಾನು ವೈಯಕ್ತಿಕವಾಗಿ ಅಲ್ಲಿಗೆ ಹೋಗಿರುವುದರಿಂದ ಅದು ತಪ್ಪು ಎಂದು ನನಗೆ ತಿಳಿದಿದೆ. ನಾವು ಮೊಹಾಲಿಯಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದೇವೆ, ನಂತರ ಸ್ಥಳಗಳನ್ನು ಬದಲಿಸಿದ್ದೇವೆ ಮತ್ತು ಪಂದ್ಯಾವಳಿಯಿಂದ ಹೊರಬಿದ್ದಿದ್ದೇವೆ. ಹೊಸ ಸ್ಥಳ - ಧರ್ಮಶಾಲಾ - ಅವರಿಗೆ ಸರಿಹೊಂದುವುದಿಲ್ಲ' ಎಂದು ಅವರು ಹೇಳಿದರು.
'ಆದ್ದರಿಂದಲೇ, ಪಂಜಾಬ್ ಸತತ ಸೋಲುಗಳನ್ನು ಅನುಭವಿಸಿದೆ ಎಂದು ನಾನು ಹೇಳುತ್ತಿದ್ದೇನೆ. ಆದರೆ, ಅವರು ಮುಲ್ಲನ್ಪುರದಲ್ಲಿ ಆಡುತ್ತಿಲ್ಲ; ಅವರು ಧರ್ಮಶಾಲಾದಲ್ಲಿ ಆಡುತ್ತಿದ್ದಾರೆ. ಅಲ್ಲಿ ವಿಕೆಟ್ ಮೊದಲು ಬ್ಯಾಟಿಂಗ್ ಮಾಡಲು ಅಷ್ಟು ಉತ್ತಮವಾಗಿಲ್ಲ. ಮೊದಲಾರ್ಧದಲ್ಲಿ ಚೆಂಡು ಸ್ವಲ್ಪ ನಿಂತು ಬರುತ್ತದೆ. ಆದ್ದರಿಂದ ಅವರು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ' ಎಂದು ಅವರು ಹೇಳಿದರು.
'ಅವರ ಬ್ಯಾಟಿಂಗ್ ಕ್ರಮಾಂಕವು 30-40 ರನ್ ಕಡಿಮೆ ಅಥವಾ 20 ರನ್ ಕಡಿಮೆ ಗಳಿಸುತ್ತಿದೆ. ಏಕೆಂದರೆ, ಅವರು ಹೊಂದಿಕೊಳ್ಳಬೇಕಾಗಿದೆ. ಪಂಜಾಬ್ ಕಷ್ಟಪಡುತ್ತಿದೆ ಮತ್ತು ಸತತ ಐದು ಸೋಲುಗಳನ್ನು ಅನುಭವಿಸಿದೆ ಅಥವಾ ಅವರು ಆ ಎರಡು ಪಂದ್ಯಗಳನ್ನು ಬದಲಾದ ತವರು ಸ್ಥಳದಲ್ಲಿ ಆಡಿದ್ದಾರೆ' ಎಂದು ಅವರು ಹೇಳಿದರು.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಆಡಿರುವ 12 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದ್ದು, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಪ್ಲೇಆಫ್ನಲ್ಲಿ ಸ್ಥಾನ ಗಳಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಪಂಜಾಬ್ ಸಿಲುಕಿದೆ.