ಧರ್ಮಶಾಲ: ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ 92 ರನ್ ಗಳ ಭರ್ಜರಿಯಾಗಿ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ತಂಡ ಫೈನಲ್ಸ್ ಪ್ರವೇಶಿಸಿದೆ.
ಧರ್ಮಶಾಲಾದ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದು, ಗುಜರಾತ್ ಗೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿತ್ತು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ 19.3 ಓವರ್ ನಲ್ಲಿ 162 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಬರೊಬ್ಬರಿ 92 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಗುಜರಾತ್ ಬ್ಯಾಟಿಂಗ್ ಸಂಪೂರ್ಣ ವಿಫಲ
ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ ವೇಗವಾಗಿ ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ (9 ಎಸೆತಗಳಲ್ಲಿ 14 ರನ್) ಶುಭ್ಮನ್ ಗಿಲ್ (7 ಎಸೆತಗಳಲ್ಲಿ 2 ರನ್) ವಿಕೆಟ್ ಕಳೆದುಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತು.
11 ಎಸೆತಗಳಲ್ಲಿ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಜೋಸ್ ಬಟ್ಲರ್ ಮತ್ತು ಕೆಳ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ (43 ಎಸೆತಗಳಲ್ಲಿ 68 ರನ್) ಹೊರತುಪಡಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಒಂದು ಅಂಕಿ ಸ್ಕೋರ್ ಗಳಿಸಲೂ ಪರದಾಡಿದರು.
ಅಂತಿಮವಾಗಿ ಗುಜರಾತ್ ತಂಡ 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 92 ರನ್ ಅಂತರದಲ್ಲಿ ಸೋಲು ಕಂಡಿತು.
ಆರ್ ಸಿಬಿ ಪರ ಜೇಕಬ್ ಡಫಿ 3 ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯಾ ಮತ್ತು ರಸಿಕ್ ಸಲಾಂ ಧಾರ್ ತಲಾ 2 ವಿಕೆಟ್ ಪಡೆದರು. ಜಾಶ್ ಹೇಜಲ್ವುಡ್ 1 ವಿಕೆಟ್ ಪಡೆದರು.
ಸತತ ಎರಡು ಬಾರಿ ಫೈನಲ್ಸ್ ಪ್ರವೇಶಿಸಿದ RCB
ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್ ಸಿಬಿ ಈಗ ಸತತ ಎರಡನೇ ಬಾರಿಗೆ ಫೈನಲ್ಸ್ ಪ್ರವೇಶಿಸಿ ದಾಖಲೆ ನಿರ್ಮಿಸಿದೆ.