ಚೆನ್ನೈ: ಮುಂದಿನ ವರ್ಷ ನಡೆಯಲಿರುವ ಐಪಿಎಲ್ 2027ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರೆಯೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ತೀವ್ರವಾಗಿ ಕಾಡುತ್ತಿದೆ. ಈ ಅನಿಶ್ಚಿತತೆ ನಡುವೆ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಮುಂದುವರಿಯುವ ಉದ್ದೇಶವಿಲ್ಲ ಎಂದು ಅವರು ಹೇಳಿರುವುದಾಗಿ CSK ಮಾಜಿ ಬ್ಯಾಟರ್ ಸುಬ್ರಮಣ್ಯಂ ಬದರಿನಾಥ್ ತಿಳಿಸಿದ್ದಾರೆ.
'ಇಂಪ್ಯಾಕ್ಟ್ ಪ್ಲೇಯರ್' ನಿಯಮ ಈ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ಗೆ ಅವರ ಕೆಲಸದೊತ್ತಡ ಕಡಿಮೆ ಮಾಡುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಮುಂದುವರೆಸಲು ಅವಕಾಶ ನೀಡುತಿತ್ತು. ಆದರೆ, ತಾವು ಆಡುವುದನ್ನು ಮುಂದುವರಿಸಿದರೆ ಪೂರ್ಣಾವಧಿಯ ವಿಕೆಟ್ ಕೀಪರ್ ಆಗಿಯೇ ಉಳಿಯಲು ಬಯಸುವುದಾಗಿ ಧೋನಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
'ಇಂಪ್ಯಾಕ್ಟ್ ಪ್ಲೇಯರ್' ಕುರಿತು ಧೋನಿ ನಿಲುವು: ಬ್ಯಾಟಿಂಗ್ನಲ್ಲಿ ಸೀಮಿತ ಆಟ ಮತ್ತು 20 ಓವರ್ಗಳ ಕಾಲ ವಿಕೆಟ್ ಕೀಪಿಂಗ್ ಮಾಡುವ ದೈಹಿಕ ಸವಾಲುಗಳನ್ನು ಪರಿಗಣಿಸಿದರೆ, ತಮ್ಮ ವೃತ್ತಿಜೀವನದ ಈ ಹಂತದಲ್ಲಿ 'ಇಂಪ್ಯಾಕ್ಟ್ ಪ್ಲೇಯರ್' ಧೋನಿಗೆ ಸೂಕ್ತವಾಗಬಹುದು ಎಂದು ಬದರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವುದಿಲ್ಲ ಎಂದು ಧೋನಿ ನನಗೆ ಹೇಳಿದ್ದಾರೆ. ಅವರು ತಮ್ಮನ್ನು ತಾವು ಪೂರ್ಣಾವಧಿಯ ಕೀಪರ್ ಆಗಿಯೇ ನೋಡಬಯುತ್ತಾರೆ. ಅಂದರೆ ಅವರು ಪೂರ್ಣ 20 ಓವರ್ಗಳ ಕಾಲ ಮೈದಾನದಲ್ಲಿ ಇರಬೇಕಾಗುತ್ತದೆ. ಹಾಗಾಗಿ ಅವರು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವುದಿಲ್ಲ, ಆದರೆ ಅವರು ಹಾಗೆ ಮಾಡಿದರೆ ಅದು ತಂತ್ರಗಾರಿಕೆಯ ದೃಷ್ಟಿಯಿಂದ ಸಿಎಸ್ಕೆಗೆ (CSK) ಪ್ರಯೋಜನಕಾರಿಯಾಗಬಹುದು ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರ ದೇಹವು ದೀರ್ಘಕಾಲದ ಒತ್ತಡವನ್ನು ತಡೆದುಕೊಳ್ಳಲಾರದು, ಇದನ್ನು ಫ್ಲೆಮಿಂಗ್ ಕೂಡ ಹೇಳಿದ್ದಾರೆ. ಅವರು ಸಾಮಾನ್ಯವಾಗಿ 16ನೇ ಓವರ್ ನಂತರವೇ ಬ್ಯಾಟಿಂಗ್ಗೆ ಬರುತ್ತಾರೆ ಮತ್ತು ವಿಕೆಟ್ ಕೀಪಿಂಗ್ ಮಾಡುತ್ತಾರೆ. ಅವರ ಭಾಗವಹಿಸುವಿಕೆ ಇಷ್ಟು ಸೀಮಿತವಾಗಿರುವಾಗ ಇಂಪ್ಯಾಕ್ಟ್ ಪ್ಲೇಯರ್' ಆಗಿ ಅವರು ಅತ್ಯುತ್ತಮ ಆಯ್ಕೆಯಾಗುತ್ತಾರೆ ಎಂದು ಬದರಿನಾಥ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಐಪಿಎಲ್ ಭವಿಷ್ಯದ ಕುರಿತು ಊಹಾಪೋಹಗಳು: 45 ವರ್ಷದ ಧೋನಿ ಇತ್ತೀಚಿನ ಸೀಸನ್ಗಳಲ್ಲಿ ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಐಪಿಎಲ್ನಲ್ಲಿ ಅವರ ಭವಿಷ್ಯವು ಊಹಾಪೋಹಗಳಿಗೆ ಕಾರಣವಾಗಿದೆ. 'ಇಂಪ್ಯಾಕ್ಟ್ ಪ್ಲೇಯರ್' ನಿಯಮ ಧೋನಿಯ ಮೇಲಿನ ಕೆಲಸದೊತ್ತಡ ಕಡಿಮೆ ಮಾಡಬಹುದು. ಅದೇ ಸಮಯದಲ್ಲಿ ಸಿಎಸ್ಕೆ ಅವರ ಅನುಭವ ಹಾಗೂ 'ಫಿನಿಶಿಂಗ್' (ಪಂದ್ಯವನ್ನು ಮುಕ್ತಾಯಗೊಳಿಸುವ) ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಬಹುದು ಎಂದು ಬದರಿನಾಥ್ ಹೇಳಿದ್ದಾರೆ.
ಆದಾಗ್ಯೂ ಧೋನಿ ವಿಕೆಟ್ ಕೀಪರ್ ಆಗಿ ಮುಂದುವರಿಯಲು ಆದ್ಯತೆ ನೀಡಿರುವುದರಿಂದ ಅವರು ಮತ್ತೊಂದು ಸೀಸನ್ಗೆ ಮರಳುತ್ತಾರೆಯೇ ಎಂಬುದನ್ನು ತಿಳಿಯಲು ಕಾಯಬೇಕಾಗಿದೆ. ಸಿಎಸ್ಕೆಯನ್ನು ಐದು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ ಧೋನಿ, 2024ರ ಸೀಸನ್ ಆರಂಭಕ್ಕೂ ಮುನ್ನ ನಾಯಕತ್ವದಿಂದ ಕೆಳಗಿಳಿದಿದ್ದರು. ಅಂದಿನಿಂದ ಆಗಾಗ್ಗೆ ಬ್ಯಾಟಿಂಗ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.