ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಪಾಕಿಸ್ತನಾ ಕ್ರಿಕೆಟ್ ಮಂಡಳಿ (PCB)ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ಮಹಿಳಾ ಕ್ರಿಕೆಟ್ ತಂಡ ನಿರಾಕರಿಸಿದ್ದು, ಸದ್ಯದ ಸನ್ನಿವೇಶಗಳು ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿ ಕೈಗೊಂಡ 'ಪ್ರಜ್ಞಾಪೂರ್ವಕ ಹಾಗೂ ಸಾಂಸ್ಥಿಕ' ನಿರ್ಧಾರವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೋಮವಾರ ತಿಳಿಸಿದ್ದಾರೆ.
ದುಬೈನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಶ್ರೀಲಂಕಾವನ್ನು 72 ರನ್ಗಳಿಂದ ಸೋಲಿಸಿತು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಘಟನೆಯ ನಂತರ 2025ರ ಏಷ್ಯಾ ಕಪ್ ವೇಳೆ ಪುರುಷರ ತಂಡದ ಹಾದಿಯನ್ನೇ ಮುಂದುವರಿಸುತ್ತಾ, ಮಹಿಳಾ ತಂಡವು ನಖ್ವಿ ಅವರಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿತು.
'ಸದ್ಯದ ಸನ್ನಿವೇಶದ ಎಲ್ಲ ಅಂಶಗಳನ್ನು ಪರಿಗಣಿಸಿ ನಾವು ಒಂದು ನಿರ್ದಿಷ್ಟ ನಿರ್ಧಾರವನ್ನು ಕೈಗೊಂಡಿದ್ದೆವು; ಅಂತಹ ಪರಿಸ್ಥಿತಿಯಲ್ಲಿ ಭಾರತೀಯ ತಂಡವು ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ನಿಲುವನ್ನು ನಾವು ಮೊದಲೇ ಎಸಿಸಿ (ACC) ಗೆ ತಿಳಿಸಿದ್ದೆವು' ಎಂದು ಸೈಕಿಯಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
'ದೇಶದಲ್ಲಿನ ಸನ್ನಿವೇಶ ಮತ್ತು ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತಾಪಿತ ರೀತಿಯಲ್ಲಿ ತಂಡವು ಟ್ರೋಫಿಯನ್ನು ಸ್ವೀಕರಿಸುವುದು ಸೂಕ್ತವಲ್ಲ ಎಂದು ಬಿಸಿಸಿಐ ಭಾವಿಸಿತು' ಎಂದರು.
'ಇದು ಸಂಸ್ಥೆಯ ದೃಢವಾದ ನಿರ್ಧಾರವಾಗಿದ್ದು, ನಾವು ಈ ಹಿಂದೆ ವ್ಯಕ್ತಪಡಿಸಿದ್ದ ನಿಲುವನ್ನೇ ಪ್ರತಿಬಿಂಬಿಸುತ್ತದೆ; ಇದು ಆಟಗಾರರನ್ನಾಗಲಿ, ಪಂದ್ಯಾವಳಿಯನ್ನಾಗಲಿ ಅಥವಾ ಕ್ರೀಡೆಯನ್ನಾಗಲಿ ಗುರಿಯಾಗಿಸಿಕೊಂಡಿರಲಿಲ್ಲ' ಎಂದು ಅವರು ಹೇಳಿದರು.
ಕಳೆದ ವರ್ಷದ ಏಪ್ರಿಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಮೇ ತಿಂಗಳಲ್ಲಿ ಈ ಎರಡು ದೇಶಗಳ ನಡುವೆ ಸಂಕ್ಷಿಪ್ತ ಮಿಲಿಟರಿ ಮುಖಾಮುಖಿಯೂ ನಡೆದಿತ್ತು.