ಮಡಿಕೇರಿ ದಸರಾ 
ದಸರಾ

ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ವೈಭವ

ಕೊಡಗು ಹಲವು ಸಾಂಸ್ಕೃತಿಕ ಧಾರ್ಮಿಕ ಆಚರಣೆಗಳಿಗೆ ಹೆಸರುವಾಸಿ. ಇಂತ ಜಿಲ್ಲೆಯಲ್ಲಿ ನವರಾತ್ರಿ ಉತ್ಸವ, ಮಡಿಕೇರಿ ದಸರಾ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ...

ದಕ್ಷಿಣ ಭಾರತದ ಕಾಶ್ಮಿರ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ನಿತ್ಯ ಹರಿಧ್ವರ್ಣ ಕಾಡುಗಳಿಗೆ ಪ್ರಸಿದ್ಧ. ಇದೇ ರೀತಿ ಕೊಡಗು ಹಲವು ಸಾಂಸ್ಕೃತಿಕ ಧಾರ್ಮಿಕ ಆಚರಣೆಗಳಿಗೆ ಹೆಸರುವಾಸಿ. ಇಂತ ಜಿಲ್ಲೆಯಲ್ಲಿ ನವರಾತ್ರಿ ಉತ್ಸವ, ಮಡಿಕೇರಿ ದಸರಾ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ.
ಕರ್ನಾಟಕದ ಸುಂದರ ಕೊಡಗು ಜಿಲ್ಲೆ ಹದಿನಾರನೆಯ ಶತಮಾನದಲ್ಲಿ ಲಿಂಗಾಯುತ ರಾಜರ ಆಳ್ವಿಕೆಯಲ್ಲಿತ್ತು. 1681 ರಲ್ಲಿ ಮುದ್ದುರಾಜನಿಂದ ಮಡಿಕೇರಿ ಮುಖ್ಯ ಪಟ್ಟಣವಾಗಿ ನಿರ್ಮಾಣವಾಯಿತು. ಊರಿನ ಮಧ್ಯಭಾಗದಲ್ಲಿ ಸುಂದರ ಅರಮನೆ, ಅರಮನೆಯ ಮುಂದೆ ಕೋಟೆ ಬಾಗಿಲಿನಲ್ಲಿ ಕೋಟೆ ಗಣಪತಿ ದೇವಸ್ಥಾನ, ಕೋಟೆಯ ಹೊರಭಾಗದ ಸುತ್ತಲು ಓಂಕಾರೇಶ್ವರ ದೇವಾಲಯ, ಕುಂದುರು ಮೊಟ್ಟೆ ಚಾಮುಂಡೇಶ್ವರಿ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಪೇಟೆ ಶ್ರೀ ರಾಮ ಮಂದಿರ ಇತ್ಯಾದಿ ದೇವಾಲಯಗಳು ರಾಜರ ಆಡಳಿತದಲ್ಲಿ ನಿರ್ಮಾಣವಾಗಿದೆ.ಪೂಜಾ ವಿಧಿ ವಿಧಾನಗಳು ಅಂದಿನಿಂದಲೇ ಕ್ರಮ ಬದ್ದವಾಗಿ ನಡೆದುಕೊಂಡು ಬರುತಿದೆ. ಕೊಡಗನ್ನು ಆಳಿದ ರಾಜರುಗಳಲ್ಲಿ ವೀರ ರಾಜೇಂದ್ರ, ಲಿಂಗ ರಾಜೇಂದ್ರ, ಚಿಕ್ಕ ವೀರ ರಾಜೇಂದ್ರರವರೆಗೆ, ಬ್ರಿಟಿಷರು ಅಧಿಕಾರವನ್ನು ಈ ರಾಜರಿಂದ ತೆಗೆದು ಕೊಳ್ಳುವವರೆಗೆ ಆಳ್ವಿವಿಕೆ ನಡೆಸಿದ್ದಾರೆ.
ದಸರಾ ಆಚರಣೆ ಹಿನ್ನಲೆ
ಜನಮನ ಸೆಳೆದಿರುವ ಮಡಿಕೇರಿ ದಸರಾ ಉತ್ಸವ ಮಡಿಕೇರಿಯ ದಸರಾ ಉತ್ಸವದ ರುವಾರಿ ರಾಜಸ್ಥಾನದ ಮೂಲದಿಂದ ಮಡಿಕೇರಿಗೆ ಬಂದು ನೆಲೆಸಿದ್ದ ಶ್ರೀ ಭೀಮ್ ಸಿಂಗ್ ರವರು. 1950 ರ ವರ್ಷಗಳಲ್ಲಿ ನವರಾತ್ರಿಯ ಕೊನೆಯ ದಿನ ವಿಜಯ ದಶಮಿಯಂದು ಭೀಮ್ ಸಿಂಗ್ ರವರು ತಮ್ಮ ತಲೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ದೇವರಿಗೆ ಪೂಜೆಯನ್ನು ಮಾಡಿಸಿಕೊಳ್ಳುತಿದ್ದರು. ನಂತರ ದೇವರ ಮೂರ್ತಿ ಪಲ್ಲಕ್ಕಿಯ ಮೇಲೆ ಹೋಗುಂತಾಯಿತು. 1958 ರಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಶಿಲ್ಪಕಲಾವಿದರಿಂದ ಮಾಡಿಸಿ ತರಿಸಿದ ಚಾಮುಂಡೇಶ್ವರಿ ಮೂರ್ತಿಯನ್ನು ಟ್ರಾಕ್ಟರ್ ಮೇಲೆ ಇರಿಸಿ ಹೂವಿನಿಂದ ಅಲಂಕಾರ ಮಾಡಿದ ಮಂಟಪದ ಮೆರವಣಿಗೆ ವಾದ್ಯಗಳೊಂದಿಗೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ದಸರ ಉತ್ಸವಕ್ಕೆ ಚಾಲನೆ ನೀಡಿದಂತಾಯಿತು. 
ನವರಾತ್ರಿಯ ಆಯುಧ ಪೂಜೆಯವರೆಗೆ ಮಡಿಕೇರಿ ನಗರದ ಎಲ್ಲಾ ಮನೆಗಳಿಗೆ ಕರಗ ಉತ್ಸವದ ಮೆರವಣಿಗೆ ಹೋಗುತ್ತಿರುತ್ತದೆ. ಮನೆಯ ಅಂಗಳವನ್ನು ಶುಚಿಗೊಳಿಸಿ ರಂಗವಲ್ಲಿ ಹಾಕಿ ಮನೆಯ ಬಾಗಿಲಿಗೆ ಬರುವ ದೇವಿಯನ್ನು ಸ್ವಾಗತಿಸಿ ಪೂಜಿಸಲು ಮನೆಯ ಮಂದಿಯಲ್ಲರೂ ಕರಗವನ್ನು ಬರ ಮಾಡಿಕೊಳ್ಳುತ್ತಾರೆ. ಕರಗ ಹೊತ್ತ ಅರ್ಚಕರನ್ನು ಒಂದು ಮಣೆಯ ಮೇಲೆ ನಿಲ್ಲಿಸಿ ಕಾಲು ತೊಳೆದು ಪಾದಪೂಜೆ ಮಾಡಿ ನಂತರ ಹಣ್ಣು ಕಾಯಿ ಸಮರ್ಪಿಸಿ, ದೇವಿಗೆ ಮಂಗಳಾರತಿಯನ್ನು ಮಾಡಿ ಮನೆ ಮಂದಿಯಲ್ಲರೂ ಪ್ರಾರ್ಥನೆ ಸಲ್ಲಿಸಿ ಕರಗವನ್ನು ಬಿಳ್ಕೊಡುತ್ತಾರೆ. ಹಲವಾರು ವರ್ಷಗಳಿಂದ ದೇವಿಯ ಕರಗವನ್ನು ಭಕ್ತಿ, ಶ್ರದ್ಧೆಯಿಂದ ಹೊತ್ತು ಸೇವೆ ಮಾಡಿದ ನಾಲ್ಕು ದೇವಾಲಯದ ಅರ್ಚಕರಾದ ಶ್ರೀಯುತರುಗಳಾದ ಪಾಪಯ್ಯ, ಗಗ್ಗಯ್ಯ, ಮಧುರಯ್ಯ, ಅಣ್ಣಯ್ಯ ಇವರುಗಳನ್ನು ಮಡಿಕೇರಿ ದಸರಾ ಸಮಿತಿ ಗೌರವ ಪೂರ್ವಕವಾಗಿ ಸನ್ಮಾನಿಸಿದೆ.
ಮಡಿಕೇರಿಯಲ್ಲಿರುವ ದೇವಾಲಯಗಳ ಪೈಕಿ, ಪೇಟೆ ಶ್ರೀ ರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಬಾಲಕ ಶ್ರೀ ರಾಮ ಮಂದಿರ ಮತ್ತು ಭೀಮ್ ಸಿಂಗ್ ರವರ ರಘುರಾಮ ಮಂದಿರಗಳ ನಾಲ್ಕು ಮಂಟಪಗಳು ಅಂದಿನ ಮಡಿಕೇರಿಯ ದಸರದ ಆಕರ್ಷಕ ಮಂಟಪಗಳಾಗಿದ್ದವು. ದಸರಾ ಮಂಟಪಗಳಲ್ಲಿ ಐತಿಹಾಸಿಕವಾಗಿ ಶಿವಾಜಿ ಖಡ್ಗವನ್ನು ದೇವಿ ಅಂಬಾ ಭಾವಾನಿಯಿಂದ ಪಡೆಯುವ ಮೂರ್ತಿ, ಭಾರತ ಮಾತೆಯ ಪದತಲದಲ್ಲಿ ಮಹಾತ್ಮ ಗಾಂಧಿ ಚರಕದಲ್ಲಿ ನೂಲು ತೆಗೆಯುತ್ತಿರುವ ಮೂರ್ತಿ, ಪೌರಾಣಿಕವಾಗಿ ಶ್ರೀ ರಾಮ ಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವ ಭಂಗ, ಮತ್ಸ್ಯ ಅವತಾರ, ಗಜೇಂದ್ರ ಮೋಕ್ಷ, ಮಹಿಷಾಸುರ ಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣ ಕಥೆಗಳನ್ನು ಅಳವಡಿಸಿಕೊಂಡು ದಸರಾ ಆಚರಿಸಲಾಗುತಿತ್ತು. 1970 ರ ದಶಕಗಳಲ್ಲಿ ಇನ್ನೂ ಹಲವು ದೇವಾಲಯದ ಮಂಟಪಗಳು ಸೇರ್ಪಡೆಯಾಗಿ ಹತ್ತು ಮಂಟಪಗಳೊಂದಿಗೆ ದಸರಾ ಉತ್ಸವ ಹೆಚ್ಚು ಹೆಚ್ಚು ಆಕರ್ಷಣೀಯವಾಯಿತು.
ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂ ಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ.ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ. ಹೆಚ್ಚು ಹೆಚ್ಚು ಜಾತ್ರಾ ವಿಶೇಷ ಸರ್ಕಾರಿ ಬಸ್ ವ್ಯವಸ್ಥೆ ಇರುತ್ತದೆ. ಬೇರೆ ಬೇರೆ ಊರುಗಳಿಂದ ಲಕ್ಷಾಂತರ ಮಂದಿ ಮಡಿಕೇರಿ ದಸರ ವೀಕ್ಷಿಸಲು ಬರುತ್ತಾರೆ. ಮಡಿಕೇರಿಯ ದಸರಾ ನಡೆಯುತ್ತಿರುವುದು ಜನರು ಭಕ್ತಿ ಪ್ರೀತಿಯಿಂದ ನೀಡುತ್ತಿರುವ ವಂತಿಗೆಯ ಹಣದಿಂದ. ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಮಾನ್ಯ ಆರ್. ಗುಂಡೂರಾವ್ ರವರು ಮಡಿಕೇರಿ ದಸರ ಉತ್ಸವಕ್ಕೆ 1980 ರಲ್ಲಿ ಕರ್ನಾಟಕ ಸರ್ಕಾರದಿಂದ ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡುವಂತೆ ವ್ಯವಸ್ಥೆ ಮಾಡಿದರು ನಂತರ ಪ್ರತಿವರ್ಷ ಸಹಯಾ ಧನವನ್ನು ಹೆಚ್ಚಿಸುತ್ತಾ ಬಂದು ಇಂದಿನ ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ನೀಡಲಾಗುತ್ತಿದೆ. ಪ್ರತಿಯೊಂದು ಮಂಟಪಗಳಿಗೆ ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಮಂಟಪಕ್ಕೆ ಸುಮಾರು 4 ರಿಂದ 24 ಲಕ್ಷದವರೆಗೆ ಖರ್ಚು ತಗಲುತ್ತದೆ. ಒಂದು ಮಂಟಪ ನಿರ್ಮಾಣ ಮಾಡಲು 2 – 3 ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತದೆ. ವಿವಿಧ ವಿನ್ಯಾಸದ ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ವಿವಿಧ ಕಥಾ ಪ್ರಸಂಗಗಳ ದೇವತಾ ಮೂರ್ತಿಗಳು 8 ರಿಂದ 15 ಅಡಿಗಳವರೆಗೆ ಇರುತ್ತದೆ.
ತಾಂತ್ರಿಕವಾಗಿ ಚಲನವಲನಗಳನ್ನು ನೀಡಿ ಧ್ವನಿ ಬೆಳಕಿನ ವ್ಯವಸ್ಥೆಯೊಂದಿಗೆ, ಕೃತಕ ಮೋಡಗಳು, ಮಿಂಚು, ಧೂಮ ಸೃಷ್ಟಿಗಳು ಒಂದಕಿಂತ ಒಂದು ಮೀರಿಸುವಂತಿರುತ್ತದೆ. ವಿದ್ಯುತ್ ದೀಪಾಲಂಕಾರದ ಬೃಹತ್ ಸೆಟ್ಟಿಂಗ್ಸ್ ಗಳು ಬೆಂಗಳೂರು, ಮಂಗಳೂರು, ತಮಿಳುನಾಡಿನ ದಿಂಡಿಗಲ್, ಚೆನ್ನೈನ ಸಿನೆಮಾ ಸ್ಟುಡಿಯೋಗಳಿಂದ ಬರುತ್ತದೆ. ಮಂಟಪಗಳ ಮುಂದೆ ತಂಜಾವೂರಿನಿಂದ ಕೀಲು ಕುದುರೆ, ಮೈಸೂರು ಪ್ಯಾಲೆಸ್ ಬ್ಯಾಂಡ್, ಕೇರಳದ ತ್ರಿಶೂರಿನಿಂದ ಬೆಂಕಿಯೊಂದಿಗೆ ಸರಸವಾಡುತ್ತ ನುಡಿಸುವ ಗರಡಿ ಬ್ಯಾಂಡ್ ಗಳು ಉತ್ಸವದಲ್ಲಿ ಭಾಗಿಯಾಗಿರುವ ಸಾವಿರಾರು ಯುವಕರು ರಾತ್ರಿಯಿಂದ ಬೆಳಗಿನವರೆಗೆ ಮೆರವಣಿಗೆಯ ಜೊತೆಗೆ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ.
ದಸರಾ ದಶ ಮಂಟಪಗಳ ಶೋಭಾಯಾತ್ರೆ
ಮಡಿಕೇರಿ ದಸರಾ ವೀಕ್ಷಿಸಲು ಬಂದಂತಹ ಲಕ್ಷಾಂತರ ಜನರಿಗೆ ವಿವಿಧ ದೇವಾಲಯಗಳ ವೈವಿಧ್ಯಮಯ ಮಂಟಪಗಳನ್ನು ನಿರ್ಮಾಣ ಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ ನಂತರ ಪೂಜಾ ವಿದಿ ವಿಧಾನಗಳನ್ನು ಮುಗಿಸಿ ಜನಸಾಗರದೊಂದಿಗೆ ದಶ ಮಂಟಪಗಳು ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ರಾತ್ರಿಯಿಂದಲೇ ಮೆರವಣಿಗೆ ಪ್ರಾರಂಭವಾಗುತ್ತದೆ. ದಸರವನ್ನು ಉತ್ಸವವನ್ನು ಆಚರಿಸಿಕೊಂಡು ಬರುತಿರುವ 150 ವರ್ಷದ ಇತಿಹಾಸ ಇರುವ ಪೇಟೆ ಶ್ರೀರಾಮ ಮಂದಿರ, 96 ವರ್ಷದ ದೇಚೂರು ಶ್ರೀರಾಮ ಮಂದಿರ , 85 ವರ್ಷದ ದಂಡಿನ ಮಾರಿಯಮ್ಮ ದೇವಾಲಯ, 52 ವರ್ಷದ ಚೌಡೇಶ್ವರಿ ದೇವಾಲಯ, 51 ವರ್ಷದ ಕಂಚಿ ಕಾಮಾಕ್ಷಿ ದೇವಾಲಯ, 41 ವರ್ಷದ ಕುಂದುರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ, 39 ವರ್ಷದ ಕೋಟೆ ಮಾರಿಯಮ್ಮ ದೇವಾಲಯ, 39 ಕೋಟೆ ಗಣಪತಿ ದೇವಾಲಯ, 40 ವರ್ಷದ ಮಲ್ಲಿಕಾರ್ಜುನ ಶ್ರೀ ರಾಮ ಮಂದಿರ, 19 ವರ್ಷದ ಕರವಾಲೆ ಭಗವತಿ ದೇವಾಸ್ಥಾನಗಳ ಮಂಟಪಗಳು ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ನಾಲ್ಕು ಕರಗಗಳ ಸಮೇತ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತದೆ. ಜಾತಿ ಮತ ಭೇದ ವಿಲ್ಲದೆ ದಸರಾ ನಾಡ ಹಬ್ಬವು ಶಾಂತಿಪ್ರಿಯ ಮಡಿಕೇರಿಯಲ್ಲಿ ಶತಮಾನದಿಂದ ಮತಿಯ ಸೌಹಾರ್ದತೆಯನ್ನು ಎತ್ತಿ ಹಿಡಿದು ವೈಭಯುತವಾಗಿ ನಡೆದುಕೊಂಡು ಬರುತ್ತಿದೆ.
ಮಡಿಕೇರಿ ದಸರೆಯ ವಿವಿಧ ಕಾರ್ಯಕ್ರಮಗಳು
ದಸರಾ ಉತ್ಸವದ ಸಂದರ್ಭದಲ್ಲಿ ದಸರಾ ಕ್ರೀಡಾ ಕೂಟ, ಕವಿಗೋಷ್ಠಿ, ಸಂಗೀತ, ನೃತ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊದಲ ಏಳು ದಿವಸ ಮಡಿಕೇರಿ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದರೆ, ಉಳಿದ ಮೂರು ದಿನಗಳ ಕಾರ್ಯಕ್ರಮ ರಾಜಾಸೀಟ್ ಬಳಿ ಇರುವ ಗಾಂಧಿ ಮಂಟಪ (ಮಹಾತ್ಮ ಗಾಂಧಿಜಿಯ ಚಿತಾ ಭಸ್ಮ ಇಟ್ಟು ಕಟ್ಟಲಾದ ಭಾರತದ ಎರಡನೇಯ ಸ್ಮಾರಕ) ಮೈದಾನದಲ್ಲಿರುವ ಬಯಲು ರಂಗ ಮಂದಿರದಲ್ಲಿ ನಡೆಯುತ್ತದೆ. ವಿಜಯ ದಶಮಿಯ ದಿನ ರಾತ್ರಿಯಿಂದ ಬೆಳಗಿನವರೆಗೆ ರಸಮಂಜರಿ, ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದು ಬೆಳಗಿನ ಜಾವದಲ್ಲಿ ದಸರಾ ಮಂಟಪಗಳಿಗೆ ಮೂರು ಬಹುಮಾನಗಳನ್ನು ನೀಡುತ್ತಾರೆ. ಬಹುಮಾನ ಪಡೆಯಲು ಮಂಟಪಗಳ ಪೂರ್ವ ತಯಾರಿ ಯೋಜನೆಗಳು ಹಲವಾರು ತಿಂಗಳಿನಿಂದ ನಡೆಯುತ್ತದೆ.
- ವಿಶ್ವನಾಥ್.ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!

ಸಿದ್ದು ಸರ್ಕಾರದ ವಿರುದ್ಧ SC ಒಳಮೀಸಲಾತಿ ಕಿಚ್ಚು: ಫ್ರೀಡಂಪಾರ್ಕ್‌ನಲ್ಲಿ ಸ್ಪೃಶ್ಯ ಸಮುದಾಯದಿಂದ ಉಗ್ರ ಹೋರಾಟ, ಆತ್ಮಹತ್ಯೆಗೆ ಮಹಿಳೆ ಯತ್ನ!

ಬಿಹಾರಕ್ಕೆ ಮೋದಿ ಬಂಪರ್ ಗಿಫ್ಟ್: 7,616 ಕೋಟಿ ರೂ. ರೈಲು, ರಸ್ತೆ ಯೋಜನೆಗಳಿಗೆ ಕೇಂದ್ರ ಅನುಮೋದನೆ

ಮದ್ದೂರು: ಅದ್ಧೂರಿ ಸಾಮೂಹಿಕ ಗಣೇಶ ವಿಸರ್ಜನೆ; ಬಿಜೆಪಿ ನಾಯಕರು ಭಾಗಿ, ಸರ್ಕಾರದ ವಿರುದ್ಧ ವಾಗ್ದಾಳಿ; Video

ಅಕ್ರಮ ಗಣಿಗಾರಿಕೆ ತಡೆ, ಆಸ್ತಿ ಜಪ್ತಿ ಕಾನೂನಿಗೆ ಅಧಿಕೃತ ಮುದ್ರೆ: ರಾಜ್ಯ ಗೆಜೆಟ್‌ನಲ್ಲಿ ಪ್ರಕಟ

SCROLL FOR NEXT