ಮಲೆ ಮಹದೇಶ್ವರ ದೇವಸ್ಥಾನ 
ಜಿಲ್ಲಾ ಸುದ್ದಿ

ಮಲೆ ಮಹದೇಶ್ವರರ ಬೆಟ್ಟ ಪ್ರಾಧಿಕಾರಕ್ಕೆ ಇದುವರೆಗೂ ನೇಮಕವಾಗದ ಸದಸ್ಯರು

ಪ್ರಾಧಿಕಾರಕ್ಕೆ ಸದಸ್ಯರನ್ನೇ ನೇಮಕ ಮಾಡದೆ ಮೊದಲ ಸಭೆ ನಡೆಸಲಾಗಿದೆ.

ಮೈಸೂರು: ಮಹದೇಶ್ವರರು ಸಂಚರಿಸಿದ ಸ್ಥಳಗಳ ಅಭಿವೃದ್ಧಿಗಾಗಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬ ಭಕ್ತರ ಬಹುದಿನಗಳ ಬೇಡಿಕೆ ಈಡೇರಿದೆ. ಆದರೆ ಪ್ರಾಧಿಕಾರಕ್ಕೆ ಸದಸ್ಯರನ್ನೇ ನೇಮಕ ಮಾಡದೆ ಮೊದಲ ಸಭೆ ನಡೆಸಲಾಗಿದೆ.

ಮಲೆ ಮಹದೇಶ್ವರ ದೇವಸ್ಥಾನ ಈವರೆಗೆ ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟು, ರಾಜ್ಯದಲ್ಲಿಯೇ ಹೆಚ್ಚು ಆದಾಯವಿರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಮುಂದೆ ಈ ದೇವಸ್ಥಾನ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ.

ಮಹದೇಶ್ವರರು ಮಲೆ ಮಹದೇಶ್ವರಬೆಟ್ಟ ಮಾತ್ರವಲ್ಲದೇ ಕುಂತೂರು, ಸುತ್ತೂರು, ಭೀಮನ ಕೊಲ್ಲಿ, ಅಂಬಿಗರಹಳ್ಳಿ ಮೊದಲಾದ ಕಡೆ ಸಂಚರಿಸಿದ್ದಾರೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಪ್ರದೇಶಗಳನ್ನೆಲ್ಲಾ ಅಭಿವೃದ್ಧಿಪಡಿಸಲು ಪ್ರಾಧಿಕಾರ ರಚಿಸಬೇಕು ಎಂದು ಮಹದೇಶ್ವರ ಜಯಂತ್ಯುತ್ಸವ ಸಮಿತಿಯು ಆಗ್ರಹಿಸಿತ್ತು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜಯಂತಿ ಆಚರಿಸಿತ್ತು. ನಂತರ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಮಾಗಮದಿಂದ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರ ಎನಿಸಿರುವ ಅಂಬಿಗರಹಳ್ಳಿಯ ಬಳಿ ಪ್ರಥಮ ಕುಂಭಮೇಳವನ್ನು ಕೂಡ ನಡೆಸಿತ್ತು.

ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಸ್ವಾಮೀಜಿ ನೇತೃತ್ವವಹಿಸಿದ್ದರು. ಕನಕ ಗುರುಪೀಠ ಸೇರಿದಂತೆ ಹತ್ತು ಹಲವು ಮಠಾಧೀಶರು ಈ ಕಾರ್ಯಕ್ಕೆ ಕೈಜೋಡಿಸಿದ್ದರು.

ಇವರೆಲ್ಲರ ಬೇಡಿಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದೇಶ್ವರ ಬೆಟ್ಟ ಪ್ರಾಧಿಕಾರ ರಚಿಸಿದ್ದಾರೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್ .ಎಸ್.ಮಹದೇವಪ್ರಸಾದ್ ಅವರ ಒತ್ತಾಸೆ ಕೂಡ ಇಲ್ಲಿ ಕೆಲಸ ಮಾಡಿದೆ.

ಕಳೆದ ವಾರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಪ್ರಥಮ ಸಭೆ ನಡೆಸಿದ್ದಾರೆ. ಅವರೇ ಈ ಪ್ರಾಧಿಕಾರದ ಅಧ್ಯಕ್ಷರು. ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿಯಾದ ಡಿ.ಭಾರತಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಪ್ರಾಧಿಕಾರದ ಕಾಯ್ದೆಯ ಪ್ರಕಾರ ಐವರು ಸದಸ್ಯರ ನೇಮಕವಾಗಬೇಕಿದೆ. ಈ ಪೈಕಿ ತಲಾ ಒಬ್ಬರು ಪರಿಶಿಷ್ಟ ಜಾತಿ, ವರ್ಗ ಮತ್ತು ಮಹಿಳಾ ಪ್ರತಿನಿಧಿ. ಇನ್ನಿಬ್ಬರು ಸಾಮಾನ್ಯ ವರ್ಗದವರು.

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು, ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

SCROLL FOR NEXT