ಜಿಲ್ಲಾ ಸುದ್ದಿ

25 ಲಕ್ಷ ಆಭರಣ ದೋಚಿದ ಕಳ್ಳಿಯರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

Vishwanath S

ದೊಡ್ಡಬಳ್ಳಾಪುರ: ಗ್ರಾಹಕರ ಸೋಗಿನಲ್ಲಿ ದೊಡ್ಡಬಳ್ಳಾಪುರದ ಚಿನ್ನಾಭರಣ ಅಂಗಡಿಯೊಂದಕ್ಕೆ ಬಂದ ನಾಲ್ವರು ಚಾಲಾಕಿ ಕಳ್ಳಿಯರ ತಂಡ ಕೇವಲ ನಾಲ್ಕೇ ನಿಮಿಷದಲ್ಲಿ 25 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಮಹೇಂದ್ರ ಕುಮಾರ್ ಎಂಬುವರ ಮಳಿಗೆಗೆ ಬಂದ ಮೂವರು ಮಹಿಳೆಯರು ಮಾಲೀಕ ಮಹೇಂದ್ರ ಕುಮಾರಗೆ ಚಿನ್ನದ ಸರಗಳನ್ನು ತೋರಿಸುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳೆಯರಿಗೆ ಸರಗಳನ್ನು ತೋರಿಸುತ್ತಿದ್ದ ವೇಳೆ ಅದೇ ತಂಡದ ಮತ್ತೊಬ್ಬ ಮಹಿಳೆ ಯಾರಿಗೂ ಕಾಣದಂತೆ ಒಳ ಪ್ರವೇಶಿಸಿ ಚಿನ್ನಾಭರಣಗಳನ್ನಿಟ್ಟಿದ್ದ ಬಾಕ್ಸ್ ಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ.

ಇದಾದ ಬಳಿಕ ತಮಗೆ ಆಭರಣಗಳು ಇಷ್ಟವಾಗಿಲ್ಲವಂತೆ ನಟಿಸಿ ಮೂವರು ಅಲ್ಲಿದ್ದ ಕಾಲ್ಕಿತ್ತಿದ್ದಾರೆ. ಮಾಲೀಕ ಮಹೇಂದ್ರ ಕುಮಾರ್ ಗ್ರಾಹಕರೊಬ್ಬರಿಗೆ ಆಭರಣಗಳನ್ನು ತೋರಿಸಲು ಬಾಕ್ಸ್ ತರಲು ಒಳ ಹೋದ ವೇಳೆ ಚಿನ್ನಾಭರಣ ಕಳುವಾಗಿರುವುದು ತಿಳಿದುಬಂದಿದೆ. ಇದರಿಂದ ಗಾಬರಿಯಾದ ಮಾಲೀಕರು ಅಂಗಡಿಗೆ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳಿಯರ ಚಾಲಾಕಿತನ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾಲ್ವರು ಕಳ್ಳಿಯರು ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

SCROLL FOR NEXT