ಜಿಲ್ಲಾ ಸುದ್ದಿ

ಪ್ರೇಯಸಿಯ ಕೊಲೆಗೆ ಯತ್ನಿಸಿ, ಆತ್ಮಹತ್ಯೆಗೆ ಶರಣು

ಬೆಂಗಳೂರು: ಪ್ರೀತಿಗೆ ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ವ್ಯಕ್ತಿಯೊಬ್ಬ ನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಳಿಮಾವು ಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ದೇವಿ ಪ್ರಸಾದ್(24) ಮೃತನು. ಹುಳಿಮಾವು ಪ್ರದೇಶದಲ್ಲಿರುವ ಗ್ರಾರ್ಮೆಂಟ್ಸ್‌ವೊಂದರಲ್ಲಿ ಉತ್ತರ ಪ್ರದೇಶದ ಪೂಜಾ(20) ಎಂಬಾಕೆಯೂ ಕೆಲಸ ಮಾಡುತ್ತಿದ್ದು, ಪಿಜೆಯೊಂದರಲ್ಲಿ ವಾಸವಿದ್ದಳು.

ದೇವಿಪ್ರಸಾದ್ ಹಾಗೂ ಪೂಜಾ ಒಂದೇ ಊರಿನವರು. ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಪರಸ್ಪರ ಪರಿಚಯವಾಗಿತ್ತು. ಈ ನಡುವೆ ದೇವಿ ಪ್ರಸಾದ್, ಪೂಜಾಳನ್ನು ಪ್ರೀತಿಸಲು ಆರಂಭಿಸಿದ್ದ. ಆದರೆ, ಪೂಜಾಳಿಗೆ ಅದು ಇಷ್ಟವಿರಲಿಲ್ಲ. ಹಲವು ಬಾರಿ ಪ್ರೀತಿಗೆ ಮನವಿ ಮಾಡಿದರೂ ಪೂಜಾ ಒಪ್ಪಿರಲಿಲ್ಲ, ಅಲ್ಲದೇ ತನ್ನ ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂದು ದೇವಿಪ್ರಸಾದ್‌ಗೆ ತಿಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕುಪಿತಗೊಂಡಿದ್ದ ದೇವಿಪ್ರಸಾದ್, ಶನಿವಾರ ರಾತ್ರಿ ಪೂಜಾ ವಾಸವಿದ್ದ ಪಿಜಿ ಬಳಿ ಹೋಗಿ, ಪ್ರೀತಿ ಪ್ರಸ್ತಾಪವಟ್ಟಿದ್ದಾನೆ. ಇದನ್ನು ಪೂಜಾ ನಿರಾಕರಿಸಿದ್ದರಿಂದ ತಾನು ತಂದಿದ್ದ ಚಾಕುವಿನಿಂದ ಆಕೆಯ ಕತ್ತು ಕುಯ್ಯಲು ಯತ್ನಿಸಿದ್ದಾನೆ. ಆತನಿಂದ ತಪ್ಪಿಸಿಕೊಂಡು ಓಡಿದ ಪೂಜಾ, ಪಿಜಿ ವಾರ್ಡನ್‌ಗೆ ವಿಷಯ ತಿಳಿಸಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಳು.

ಆದರೆ, ಭಾನುವಾರ ಬೆಳಿಗ್ಗೆ ಹುಳಿಮಾವು ಸಮೀಪದ ಶಾಂತಿನಿಕೇತನ ಬಡಾವಣೆಯಲ್ಲಿರುವ ಮರವೊಂದರಲ್ಲಿ ದೇವಿಪ್ರಸಾದ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂಧನ ಭೀತಿಯಿಂದ, ಪ್ರೀತಿ ಸಿಗದ ಬೇಸರದಿಂದ ದೇವಿಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT