ಜಿಲ್ಲಾ ಸುದ್ದಿ

ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬಾಳಬೇಕು: ಸಿಎಂ

ಬೆಂಗಳೂರು: ದೇಶದಲ್ಲಿ ಕೋಮು ಸೌಹಾರ್ದ ಕಾಪಾಡಲು ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಶ್ರೀ ಎಂ. ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ `ಭರವಸೆಯ ನಡಿಗೆ 2015-16' (ವಾಕ್ ಆಫ್ ಹೋಪ್) ಪಾದಯಾತ್ರೆ ನಗರದ ತಲಘಟ್ಟಪುರ ತಲುಪಿದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ದೇಶದಲ್ಲಿ ಕೋಮು ಸೌಹಾರ್ದ ತರಲು ಧರ್ಮಗಳ ನಡುವೆ ಪ್ರೀತಿ ಹಾಗೂ ಸಹಬಾಳ್ವೆಯ ಭದ್ರಬುನಾದಿ ಹಾಕಬೇಕು. ಶ್ರೀ ಎಂ. ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ನಡೆಯುತ್ತಿರುವ ಪಾದಯಾತ್ರೆ, ಕೋಮು ಸೌಹಾರ್ದ ಸಾರುವಲ್ಲಿ ಯಶಸ್ವಿಯಾಗಲಿದೆ.

 6500 ಕಿ.ಮೀ. ದೂರದ ಪಾದಯಾತ್ರೆ ಕೇರಳ ರಾಜ್ಯ ದಾಟಿ ಕರ್ನಾಟಕಕ್ಕೆ ಬಂದಿರುವುದು ಉತ್ತಮ ಸಾಧನೆಯಾಗಿದ್ದು, ಪಾದಯಾತ್ರೆಯ ಪರಿಕಲ್ಪನೆಯೇ ರೋಮಾಂಚಕ ಸಂಗತಿಯಾಗಿದೆ. ಹಿಂದೊಮ್ಮೆ ಬೆಂಗಳೂರಿನಿಂದ 320 ಕಿ.ಮೀ. ದೂರದ ಬಳ್ಳಾರಿಗೆ ಕಾಂಗ್ರೆಸ್ಸಿಗರು 16 ದಿನಗಳ ಕಾಲ ಪಾದಯಾತ್ರೆ ಕೈಗೊಂಡಿದ್ದರು. ಕಾಲು ನಡಿಗೆಯಲ್ಲಿ ಸಾವಿರಾರು ಕಿ.ಮೀ. ನಡೆಯಲು ಇಚ್ಛಾಶಕ್ತಿ ಅಗತ್ಯ' ಎಂದರು.

ಶ್ರೀ ಎಂ.ಮಾತನಾಡಿ, ಪ್ರತಿಯೊಬ್ಬರೂ ಮತ್ತೊಬ್ಬರನ್ನು  ನೋಯಿಸದೆ ಬದುಕಬೇಕು. ವಿವಿಧತೆಯಲ್ಲಿ ಏಕತೆ ಎಂಬುದು ಜಗತ್ತಿನಲ್ಲೇ ಅದ್ಭುತ ಪರಿಕಲ್ಪನೆಯಾಗಿದೆ. ಇಂದಿಗೂ ದೇಶದ ಜನಮಾನಸದಲ್ಲಿ ಇದು ಶಾಶ್ವತವಾಗಿದ್ದು, ತಪ್ಪುಗ್ರಹಿಕೆಯಿಂದ ಹುಟ್ಟುವ ಭಿನ್ನಾಭಿಪ್ರಾಯ ಅಳಿಸಿಹಾಕಲು ಈ ಪರಿಕಲ್ಪನೆ ನೆರವಾಗುತ್ತದೆ' ಎಂದರು.

ಶನಿವಾರ ಬೆಳಗ್ಗೆ 9ರಿಂದ ಕನಕಪುರ ರಸ್ತೆಯ ಶಂಕರ ಪ್ರತಿಷ್ಠಾನದಿಂದ, ಅರವಿಂದೋ ಮಾರ್ಗ, ಜಯನಗರ 9ನೇ ಮುಖ್ಯರಸ್ತೆ, ಹೊಸೂರು  ಮುಖ್ಯರಸ್ತೆ, ಕೆಎಚ್ ರಸ್ತೆ,  ರೆಸಿಡೆನ್ಸಿ ರಸ್ತೆ ಮಾರ್ಗವಾಗಿ ಸೇಂಟ್ ಮಾಕ್ರ್ಸ್ ರಸ್ತೆಗೆ 15 ಕಿ. ಮೀ ಪಾದಯಾತ್ರೆ ನಡೆಯಲಿದೆ.

SCROLL FOR NEXT