ಜಿಲ್ಲಾ ಸುದ್ದಿ

ಕೈ ಮುಕ್ತ ಭಾರತ, ಬಿಜೆಪಿ ಹಗಲುಗನಸು

ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತ, ಬಿಜೆಪಿಯ ಹಗಲುಗನಸು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಬಿಜೆಪಿ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಸಮಾಜಕಲ್ಯಾಣ ಇಲಾಖೆ ಏರ್ಪಡಿಸಿದ್ದ ಬಾಬುಜಗಜೀವನರಾಮ್ 108ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ, ಭಾನುವಾರ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಬಿಜೆಪಿ ಕಾರ್ಯ ಕಾರಣಿಯಲ್ಲಿ ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಮನಸ್ಥಿತಿ ಎಂದು ಪ್ರಧಾನಿ ಹೇಳಿದ್ದಾರೆ.

 ಇದು ಎಂದಿಗೂ ಸಾಧ್ಯವಿಲ್ಲ. ಇದು ಹಗಲುಗನಸು. ನಮ್ಮ ನಾಯಕ ಸಿದ್ದರಾಮಯ್ಯ. ಅವರು ಮುಂದಿನ ಚುನಾ ವಣೆಯಲ್ಲೂ ಸ್ಪರ್ಧಿಸಲಿದ್ದಾರೆ. ಅವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ. ಅವರು ಕನಸು ಕಾಣುವುದನ್ನು ಬಿಡಲಿ ಎಂದು ಬಿಜೆಪಿ ನಾಯಕರಿಗೆ ಕುಟುಕಿದರು. ದಲಿತ ಕಾರಣಕ್ಕೆ ಪಟ್ಟ ಸಿಗಲಿಲ್ಲ: ಬಾಬು ಜಗಜೀವನರಾಮ್ ದಲಿತರ ಎಂಬ ಕಾರಣಕ್ಕಾಗಿ ಪ್ರಧಾನಮಂತ್ರಿ ಪಟ್ಟ ನೀಡದೆ ವಂಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸ್ವತಂತ್ರ ಸೇನಾನಿಯಾಗಿದ್ದ ಬಾಬು ಜಗಜೀವನ ರಾಮ್ ದಲಿತರು ಎಂಬ ಕಾರಣಕ್ಕಾಗಿ ಅವಕಾಶ ತಪ್ಪಿಸಲಾಯಿತು.

ಆಡಳಿತ ನಡೆಸಿದ ಎಲ್ಲಾ ಇಲಾಖೆಗಳಲ್ಲೂ ಉತ್ತಮ ವ್ಯವಸ್ಥೆ ನಿರ್ಮಿಸಿದರು. ಹಸಿರು ಕ್ರಾಂತಿ ಹರಿಕಾರ. ಅವರು ಪ್ರಧಾನಿಯಾಗಬೇಕಾಗಿತ್ತು. ಪ್ರಧಾನಿ ಪಟ್ಟ ತಪ್ಪಲು ಜನತಾ ಪರಿವಾರವೇ ಮೂಲ ಕಾರಣ ಎಂದು ಆರೋಪಿಸಿದರು. ಕೊರಗು ಕಾಡುತ್ತಿದೆ: ಹಸಿರು ಕ್ರಾಂತಿ ಮೂಲಕ ಆಹಾರ ಉತ್ಪಾದನೆ ಹೆಚ್ಚಳ ಮಾಡಿದರು. ರಕ್ಷಣಾ ಸಚಿವರಾಗಿದ್ದ ವೇಳೆ ಚೀನಾ ಡೆಥ್ ವಾರ್ ನಡಿತು. ಅವರ ಗಟ್ಟಿ ನಿರ್ಧಾರ ಭಾರತದ ಗೆಲುವಿಗೆ ಕಾರಣ. ಜಾತಿಯ ಕಾರಣಕ್ಕೆ ಸಮರ್ಥ ನಾಯಕರನ್ನು ಮೂಲೆಗುಂಪು ಮಾಡಿದ ವ್ಯವಸ್ಥೆಯ ಬಗ್ಗೆ ದಲಿತರಲ್ಲಿ ಅಸಮಾಧಾನವಿದೆ, ಸ್ಥಾನ ಸಿಗದೇ ಇರುವ ಕೊರಗು ಹೆಚ್ಚು ಕಾಡುತ್ತಿದೆ ಎಂದರು.

ಪ್ರತಿಕ್ರಿಯಿಸಲ್ಲ: ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಸೋನಿಯಾಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಪ್ರತಿಕ್ರಿಯೆ ನೀಡುವುದು ಸಮಂಜಸವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಗಜೀವನ್ ರಾಮ್ ಪ್ರಶಸ್ತಿ: ಸಾಹಿತಿ ಮರುಳಸಿದ್ದಪ್ಪ ನೇತೃತ್ವದಲ್ಲಿ ಜಗಜೀವನ್ ರಾಮ್ ಪ್ರಶಸ್ತಿ ನೀಡುವ ಬಗ್ಗೆ ಸಮಿತಿ ರಚಿಸಿದ್ದು, ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲಿದ್ದು, ರು.5 ಸಾವಿರ ಬಹುಮಾನವಿದೆ. ಉತ್ತಮ ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ಶಾಸಕ ಗೋವಿಂದ ಕಾರಜೋಳ, ಲಿಡ್ಕರ್ ಅಧ್ಯಕ್ಷ ರಾಮಕೃಷ್ಣ, ರಾಜ್ಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಕಾಂತರಾಜು, ಎಸ್ಸಿಎಸ್ಟಿ ಬಣದ ಛಲವಾದಿ, ಶಾಸಕ ಗೋವಿಂದ ಕಾರಜೋಳ ಕಾರ್ಯ ಕ್ರಮದಲ್ಲಿದ್ದರು.

SCROLL FOR NEXT