ಜಿಲ್ಲಾ ಸುದ್ದಿ

ಗೌಡ್ರ ಹತ್ರ ಮಾತಾಡಲು ಪರಂಗೆ ಸಿಎಂ ಸೂಚನೆ

ಬೆಂಗಳೂರು: ಬಿಬಿಎಂಪಿ ಅಧಿಕಾರಕ್ಕಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜತೆ ಮಾತುಕತೆ ನಡೆಸುವುದಕ್ಕೆ ತೆರಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಬಳಿ ಮನವಿ ಮಾಡಿದ್ದಾರೆ.

ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡಾ. ಜಿ.ಪರಮೇಶ್ವರ ಅವರನ್ನು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ, ದೇವೇಗೌಡರ ಜತೆ ಮಾತುಕತೆ ನಡೆಸುವುದಕ್ಕೆ ತೆರಳುವಂತೆ ಮನವಿ ಮಾಡಿದರು. ಸಿಎಂ ಕಚೇರಿ ಮೂಲಗಳ ಪ್ರಕಾರ ಪರಮೇಶ್ವರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಈ ಮಧ್ಯೆ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಡಾ.ಚಲ್ಲಕುಮಾರ್ ಅವರೂ ಬೆಂಗಳೂರಿಗೆ ಆಗಮಿಸಿದ್ದು ಕಾಂಗ್ರೆಸ್  ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಆದರೆ, ಮೂಲ ಕಾಂಗ್ರೆಸಿಗರು ಮೈತ್ರಿ ಬಗ್ಗೆ ಇನ್ನಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಲ ಸಚಿವರು ಹೈಕಮಾಂಡ್‍ಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವಾಸ ಮೂಡಿಸುವವರೊಂದಿಗೆ ಮೈತ್ರಿ: ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಕಳೆದ 5 ವರ್ಷದ ಆಡಳಿತದಲ್ಲಿ ಬಿಜೆಪಿಯವರು ಬಿಬಿಎಂಪಿ ಮೇಲೆ ರು.9,600 ಕೋಟಿ ಹೊರೆ ಹೊರಿಸಿದ್ದಾರೆ. ಅದನ್ನು ಇಳಿಸಬೇಕೆಂದರೆ ರಾಜ್ಯದಲ್ಲಿ ಆಡಳಿತ ನಡೆಸುವಂತಹ ಸರ್ಕಾರದ ಆಡಳಿತ ಇಲ್ಲದಿದ್ದರೆ ನಗರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ' ಎಂದು ಹೇಳಿದ್ದಾರೆ.

SCROLL FOR NEXT