ಜಿಲ್ಲಾ ಸುದ್ದಿ

ಸ್ಥಳಿಯರೇ ಸಂಚಾರ ಪೊಲೀಸರು!

Srinivas Rao BV

ಬೆಂಗಳೂರು: ದೇವರಬೀಸನಹಳ್ಳಿ, ಶೋಭಾ ಐರಿಸ್ ಜಂಕ್ಷನ್, ಮಂತ್ರಿ ಸ್ಕ್ವೇರ್, ಸುತ್ತಮುತ್ತಲ ಬಡಾವಣೆಗಳ ಸಿಗ್ನಲ್ ರಸ್ತೆಗಳಲ್ಲಿ ಪೊಲೀಸರೇ ಇಲ್ಲ. ಅಲ್ಲಿ ಸಾರ್ವಜನಿಕರೇ ಪೊಲೀಸರು. ಈ ಭಾಗದ ರಸ್ತೆಗಳು ಕಿರಿದಾಗಿದ್ದು, ವಾಹನಗಳ ಸಂಖ್ಯೆ ಲಕ್ಷ ದಾಟಿದೆ.
ರಸ್ತೆಗಿಂತ ಹತ್ತುಪಟ್ಟು ವಾಹನಗಳಿವೆ. ಇದರಿಂದ ವಾಹನ ಮಂದಗತಿಯಲ್ಲಿ ಸಾಗಿ, ಸಂಚಾರ ದಟ್ಟಣೆ ಹೆಚ್ಚುತ್ತಿದೆ. ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಸೇರಿದಂತೆ ಜನರು ಎಲ್ಲಾ ರೀತಿಯ ಸಂಚಾರ ನಿಯಮ ಉಲ್ಲಂಘಿಸುವವರೇ ಹೆಚ್ಚು.
ಇದರಿಂದ ಹೈರಾಣಾದ ಸ್ಥಳೀಯ ಸಾರ್ವಜನಿಕರು ತಾವೇ ಸಂಚಾರ ಪೊಲೀಸರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆ ವರೆಗೆ ಇವರು ರಸ್ತೆ ಬದಿಗಳಲ್ಲಿ ನಿಂತು ಸಂಚಾರ ಪೊಲೀಸರ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಂಚಾರ ಪೊಲೀಸರು ಸಹ ಸಾಥ್ ನೀಡುತ್ತಿದ್ದಾರೆ.
ಹೀಗಿದೆ ಇವರ ಕೆಲಸ: ಸಾರ್ವಜನಿಕರ ಈ ಕೆಲಸದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಟೋಚಾಲಕ ರಫೀಕ್, ಈ ಭಾಗದಲ್ಲಿ ಸದಾ ಸಂಚಾರ ದಟ್ಟಣೆ ಇರುತ್ತಿದ್ದ ಕಾರಣ ಶಾಲೆ, ಕಚೇರಿಗಳಿಗೆ ಹೋಗಲು ಜನ ಬೇಗ ಹೊರಡಬೇಕಿತ್ತು. ಸಾಕಷ್ತು ಸಮಯ ರಸ್ತೆಯಲ್ಲೇ ಕಳೇಯಬೇಕಾಗಿತ್ತು. ಹಾಗಾಗಿ ಅಲ್ಲಿನ ಸ್ಥಳೀಯರೆಲ್ಲ ಸೇರಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಕೆಲ ದಿನಗಳ ನಂತರ ಈ ಬಗ್ಗೆ ತಿಳಿದ ನಾನು ಈ ಸೇವೆಗೆ ಕೈಜೋಡಿಸಿದ್ದೇನೆ. ಆಟೋ ಬಾಡಿಗೆಗೆ ಜನ ಇಲ್ಲದ ವೇಳೆ ತಾನೂ ಸಹ ಸಮೀಪದ ರಸ್ತೆಯಲ್ಲಿ ಕೆಲಸ ಮಾಡುತ್ತೇನೆ. ಅದಕ್ಕೂ ಮುನ್ನ ವಾಟ್ಸ್ ಆಪ್ ನಲ್ಲಿ ಮಾಹಿತಿ ಪಡೆದು ಅವರು ಹೇಳಿದ ಕಡೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಆರಂಭದ ದಿನಗಳಲ್ಲಿ ಜನ ತಮ್ಮ ಮಾತು ಕೇಳುತ್ತಿರಲಿಲ್ಲ. ಈಗ ನಿಯಮ ಪಾಲಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ತಾವು ಇದೇ ರೀತಿ ಕೆಲಸ ಮಾಡಲು ಆಗುತ್ತದೆಯೇ ಗೊತ್ತಿಲ್ಲ. ಹಾಗಾಗಿ ಕೆಲವೆಡೆ ಸಿಸಿಟಿವಿ ಅಳವಡಿಕೆಗೆ ಚಿಂತಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

SCROLL FOR NEXT