ಬೆಂಗಳೂರು: ಭೀಕರ ಮಳೆಯಿಂದ ತತ್ತರಿಸಿರುವ ತಮಿಳುನಾಡಿನ ಜನರ ನೆರವಿಗೆ ಕನ್ನಡಿಗರು ಧಾವಿಸಬೇಕು ಎಂದು ಸಾಹಿತಿ ಡಾ. ಸಿದ್ಧಲಿಂಗಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ವಸುದೇವ ಭೂಪಾಲಂ ಹಾಗೂ ವಿವಿಧ ದತ್ತಿ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದ ತಮಿಳುನಾಡಿನ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ಸಹಾಯಹಸ್ತ ಚಾಚಬೇಕು. ಜೊತೆಗೆ ತಮಿಳುನಾಡಿನಲ್ಲಿ ರಾರು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಂಕಷ್ಟದ ರಾಜ್ಯದ ನೆರವಿಗೆ ಕನ್ನಡಿಗರು ಮುಂದಾಗಬೇಕು ಎಂದರು.
ದೇಶದಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಅದೇ ರೀತಿ ಸಾವಿರಕ್ಕೂ ಹೆಚ್ಚು ವಿವಿಧ ದತ್ತಿ ಪ್ರಶಸ್ತಿಯನ್ನು ಹೊಂದಿರುವ ಕೀರ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ಪಾತ್ರವಾಗಿದೆ. ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ ಕೃತಿಗಳನ್ನು ಎಲ್ಲರೂ ಓದಬೇಕಾಗಿರುವಂತವು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಮಾತನಾಡಿ, ಯಾವುದೇ ಇಲಾಖೆ ಅಥವಾ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದಷ್ಟು ತೃಪ್ತಿ ಸಿಗುವುದಿಲ್ಲ. ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದರೆ, ನಮ್ಮದು ಎಂಬ ಭಾವನೆ ಮೂಡುತ್ತಿದೆ. ಈ ಹಿಂದೆ ತಮಗೆ ಕನ್ನಡ ಸಾಹಿತ್ಯ ಪರಿಷತ್ತಿನ ಒಳಗೆ ಹೋಗುವುದಕ್ಕೂ ಭಯವಾಗುತ್ತಿತ್ತು. ಆದರೂ, ಕಡಿಮೆ ದರದಲ್ಲಿ ಸಿಗುತ್ತಿದ್ದ ಪುಸ್ತಕಗಳನ್ನು ಖರೀದಿಸಲು ಬರುತ್ತಿದ್ದೆ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದರು.