ಜಿಲ್ಲಾ ಸುದ್ದಿ

ಜೈಲು ಹಕ್ಕಿಗಳೊಂದಿಗೆ ಹಾಡಿ ನಲಿದ ಗೃಹ ಸಚಿವ!

Shilpa D

ಮೈಸೂರು: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಮೈಸೂರು ನಗರ ಕೇಂದ್ರ ಕಾರಾಗೃಹದ ಖೈದಿ ಕಲಾವಿದರೊಂದಿಗೆ ಹಾಡುವ ಮೂಲಕ ಜೈಲುವಾಸಿಗಳನ್ನು ರಂಜಿಸಿದರು.

ಕಾರಾಗೃಹ ಇಲಾಖೆಯ ವತಿಯಿಂದ ಕೇಂದ್ರ ಕಾರಾಗೃಹದ ಕವಾಯತು ಮೈದಾನದಲ್ಲಿ 43ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪರಮೇಶ್ವರ್ ಭಾಗವಹಿಸಿದ್ದರು. ನಂತರ ಅವರು ಕಾರಾಗೃಹದ ಪರಿಶೀಲನೆಗೆ ತೆರಳಿದ್ದರು. ಆಗ, ಕೈದಿಗಳ ಮನಪರಿವರ್ತನೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಜೈಲಿನಲ್ಲಿ ನಡೆಸುತ್ತಿರುವ ಕುರಿತು ಅಧಿಕಾರಿಗಳು ಗೃಹಸಚಿವರಿಗೆ ಮಾಹಿತಿ ನೀಡುತ್ತಿದ್ದರು.

ಖೈದಿಗಳೇ ಸೇರಿ ಕಟ್ಟಿಕೊಂಡಿರುವ 'ಪರಿವರ್ತನಾ ಮೆಲೋಡೀಸ್' ಆರ್ಕೆಸ್ಟ್ರಾ ತಂಡದವರು 'ಕರುನಾಡ ತಾಯಿ ಸದಾ ಚಿನ್ಮಯಿ' ಕನ್ನಡ ಚಲಚನಚಿತ್ರ ಗೀತೆಯನ್ನು ಹಾಡುತ್ತಿದ್ದರು. ಆ ಕಲಾವಿದರ ಬಯಕೆಯಂತೆ ಮೈಕ್ ಹಿಡಿದು ನಿಂತು 'ಕೈದಿ ಗಾಯಕ'ರೊಬ್ಬರ ಜತೆ ಚರಣ ಹಾಗೂ ಪಲ್ಲವಿಯನ್ನು ಸಚಿವರು ಹಾಡಿದರು. ಇದು ಕೈದಿಗಳು ಹಾಗೂ ಅಲ್ಲಿನ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು.

ತನ್ನೊಂದಿಗೆ ಹಾಡಿದ ಗಾಯಕ ಹಾಗೂ ವಾದ್ಯ ನುಡಿಸಿದ ಕಲಾವಿದರ ಬೆನ್ನು ತಟ್ಟಿದ ಗೃಹ ಸಚಿವರು, ಇಂಥ ರಚನಾತ್ಮಕ ಚಟುವಟಿಕೆಗಳನ್ನು ಮುಂದುವರಿಸುವಂತೆ ತಿಳಿಸಿದರು.

SCROLL FOR NEXT