ಕೆ.ಆರ್.ಪುರ: ಕೃಷ್ಣರಾಜಪುರ, ಮಹದೇವಪುರ ಪ್ರದೇಶ ವ್ಯಾಪ್ತಿಯ ಟೆಕಿಗಳು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಸಂಚಾರ ದಟ್ಟಣೆ, ಕಸದ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ, ಪಾದಚಾರಿ ರಸ್ತೆ ಒತ್ತುವರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬೇಸತ್ತಿರುವ ಈ ಭಾಗದ ಜನರು ಶುಕ್ರವಾರ ಬೀದಿಗಿಳಿದಿದ್ದರು. ಪ್ರತಿಭಟನೆಯನ್ನು ಆರ್ ಎಂಜೆಡ್, ಇಕೋಸ್ಪೇಸ್, ಪ್ರಿಸ್ಟೇಜ್ ಟಿ ಪಾರ್ಕ್, ಹಾಲನಾಯಕನಹಳ್ಳಿ ಗ್ರಾಮಸ್ಥರು, ಬೆಳ್ಳಂದೂರು ಭಾಗದ ಶ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೂರಾರು ಮಂದಿ ಭಾಗವಹಿಸಿದ್ದರು.
ಕಸ ಮುಕ್ತ ಬೆಳ್ಳಂದೂರು ಸಂಘಟನೆ ಸದಸ್ಯೆ ಮೀತಾನಾಯರ್ ಮಾತನಾಡಿ, ಯಾವುದೇ ಮುಂದಾಲೋಚನೆ ಇಲ್ಲದೆ ಈ ಭಾಗದಲ್ಲಿ ಬಹು ಮಹಡಿ ಕಟ್ಟಡಗಳು, ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಆರಂಭವಾಗಿವೆ. ಆದರೆ, ಮೂಲಸೌಲಭ್ಯ ಇಲ್ಲದೆ ಸಮಸ್ಯೆ ಹೆಚ್ಚಾಗಿದೆ. ರಸ್ತೆ, ಒಳಚರಂಡಿ, ಕಸ ಸೇರಿದಂತೆ ಅನೇಕ ಸಮಸ್ಯೆಗಳಿಂದ ಗಳಿಂದ ಬಳಲುತ್ತಿರುವ ಈ ಭಾಗದಲ್ಲಿ ಶಾಲಾ-ಕಾಲೇಜುಗಳಿವೆ. ಇದೇ ಭಾಗದಲ್ಲಿ ಕಸವನ್ನು ಸುಡುತ್ತಿರುವುದರಿಂದ ಉಂಟಾಗುವ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.