ಜಿಲ್ಲಾ ಸುದ್ದಿ

ಲಂಕೇಶ್ ಇದ್ದಿದ್ದರೆ ಸಹಿಷ್ಣುತೆ- ಅಸಹಿಷ್ಣುತೆ ನಿಖರತೆ ಗೊತ್ತಾಗುತ್ತಿತ್ತು: ಪ್ರಕಾಶ್ ಬೆಳವಾಡಿ

Srinivas Rao BV

ಬೆಂಗಳೂರು: ಈಗ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಹಿಷ್ಣುತೆ ಮತ್ತು ಅಸಹಿಷ್ಣುತೆಯನ್ನು ಪ್ರತಿಪಾದಿಸುತ್ತಿರುವ ಆಯಾ ಗುಂಪುಗಳಿಗೆ ಅದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಲಂಕೇಶ್ ಬದುಕಿದ್ದರೆ ಇವೆರಡರ ಬಗ್ಗೆ ನಿಖರವಾಗಿ ಅರ್ಥೈಸುತ್ತಿದ್ದರು ಎಂದು ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು.
ಜನಸಂಸ್ಕೃತಿ, ಅವಿರತ ಪುಸ್ತಕ ಮತ್ತು ಬೆಂಗಳೂರು ಆರ್ಟ್ ಫೌಂಡೇಷನ್ ವತಿಯಿಂದ ಬಾದಾಮಿ ಹೌಸ್ ನಲ್ಲಿ ಆಯೋಜಿಸಿರುವ 3 ದಿನಗಳ ಈಗ ಇರಬೇಕಿತ್ತು ಲಂಕೇಶ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಸಹಿಷ್ಣುತೆ, ಅಸಹಿಷ್ಣುತೆ ಪದ ಬಳಸುತ್ತಿರುವ ರಾಜಕಾರಣಿಗಳು, ಸಾಹಿತಿಗಳು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಈ ಪದಗಳನ್ನು ಬಾಲಿಶಗೊಳಿಸಿದ್ದಾರೆ. ಎಚ್ಚರಿಕೆಯಿಂದ ಬಳಸುವ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದಾರೆ.
ತೇಜಸ್ವಿ ಮತ್ತು ಲಂಕೇಶ್ ಇಲ್ಲದಿರುವುದರಿಂದ ಕನ್ನಡವೇ ಚೇತನ ಕಳೆದುಕೊಂಡಂತಾಗಿದೆ. ಯಾರು ಏನು ಬೇಕಾದರು ಮಾತನಾಡುವಂತಹ ಸ್ಥಿತಿ ಇದೆ ಎಂದರು.
ಬೆಂಗಳೂರು ಗಾರ್ಬೇಜ್ ಸಿಟಿಯಾಗುತ್ತಿರುವುದನ್ನು ಕಂಡ ನಮಗೆ ಏನೇನೂ ಅನಿಸುತ್ತಿಲ್ಲ. ಅದೇ ಲಂಕೇಶರಾಗಿದ್ದರೆ ತಮ್ಮ ಪತ್ರಿಕೆಯಲ್ಲಿ ಗೇಲಿ ಮಾಡಿ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದರು. ಅಷ್ಟು ಧೈರ್ಯ ಇವತ್ತಿನವರಿಗೆ ಇಲ್ಲ. ಜಗಳ ಮಾಡುವ ಲಂಕೇಶ್ ವಿಶ್ವಾಸದಿಂದ ಇರುತ್ತಿದ್ದರು. ವೈಯಕ್ತಿಕವಾಗಿ ಕೆಟ್ಟದಾಗಿ ಮಾತಾಡುವುದನ್ನು ಸಹಿಸುತ್ತಿರಲಿಲ್ಲ. ಗೇಲಿ ಮಾಡುತ್ತಿದ್ದು ಬೇರೆಯೇ ರೀತಿಯಲ್ಲಿರುತ್ತಿತ್ತು ಹೊರತು ವೈಯಕ್ತಿಕವಾಗಿರಲಿಲ್ಲ. ಸಾಹಿತ್ಯ, ಸಿನಿಮಾ, ರಾಜಕೀಯ ಹಾಗೂ ಪತ್ರಿಕೋದ್ಯಮದ ಬಗ್ಗೆ ತಿಳಿದುಕೊಂಡಿದ್ದರು. ಅವರೊಬ್ಬ ಪತ್ರಿಕೋದ್ಯಮದ ರುವಾರಿಯಾಗಿದ್ದರು ಎಂದು ಬೆಳವಾಡಿ ಹೇಳಿದರು.

SCROLL FOR NEXT