ಜಿಲ್ಲಾ ಸುದ್ದಿ

ಚಾಕುವಿನಿಂದ ಇರಿದು ಪತ್ನಿ ಹತ್ಯೆ

ಬೆಂಗಳೂರು: ರಾಮ(26) ಎಂಬಾತ ಪತ್ನಿ ಯಲ್ಲಮ್ಮ(23) ಅವರನ್ನು ಮಾರಕಾಸ್ತ್ರಗಳಿಂದ ಇರಿದು ಭಾಕರವಾಗಿ ಹತ್ಯೆಗೈದಿದ್ದಾನೆ. ಕೆಲಸ ಅರಸಿ ನಗರಕ್ಕೆ ಬಂದಿದ್ದ ಯಾದಗಿರಿ ಮೂಲದ ದಂಪತಿಗೆ 8 ತಿಂಗಳ ಹಿಂದೆ ವಿವಾಹವಾಗಿತ್ತು.

ಆರೋಪಿ ಪರಶುರಾಮ ಎಲೆಕ್ಟ್ರೀಷಿಯನ್ ಆಗಿದ್ದ. ಯಲ್ಲಮ್ಮ ಗಾರ್ಮೆಂಟ್ಸ್‍ಗೆ ಕೆಲಸಕ್ಕೆ ಹೋಗುತ್ತಿದ್ದಳು. ಅನೈತಿಕ ಸಂಬಂಧದ ಅನುಮಾನದ ಮೇಲೆ ಪರಶುರಾಮ ಪತ್ನಿ ಜತೆ ಆಗಾಗ ಜಗಳ ತೆಗೆಯುತ್ತಿದ್ದ. ಇದೇ ವಿಚಾರಕ್ಕೆ ಸೋಮವಾರ ನಸುಕಿನ 3 ಗಂಟೆಯಲ್ಲಿ ದಂಪತಿ ನಡುವೆ ಜಗಳವಾಗಿದೆ. ಕೋಪಗೊಂಡ ಪರಶುರಾಮ ಚಾಕುವಿನಿಂದ ಪತ್ನಿಯ ಹೊಟ್ಟೆ ಮತ್ತು ಎದೆಗೆ ಇರಿದಿದ್ದಾನೆ. ಜಗಳ ಕೇಳಿಸಿಕೊಂಡ ನೆರೆಮನೆಯವರು ಹೊರಗೆ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಲ್ಲಮ್ಮನ ಕಂಡು ಆ್ಯಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪರಾರಿಯಾಗಲು ಯತ್ನಿಸಿದ ಪರಶುರಾಮನನ್ನು ಸ್ಥಳೀಯರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪತ್ನಿಗೆ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.

SCROLL FOR NEXT