ಮೈಸೂರು: ಸಂಕ್ರಾಂತಿ ಎಂದರೇ ಅದು ಕೃಷಿಕರ ಬದುಕಿನ ಹರ್ಷದ ಹೊನಲು. ನವಧ್ಯಾನಗಳ ಆಗಮನದ ಸಂಭ್ರಮ. ಗ್ರಾಮೀಣ ಪ್ರದೇಶದಲ್ಲಿ ಆ ಹಬ್ಬದ ಸೊಗಡು ಅನನ್ಯ. ಅಂತಹ ಕಾಲದಲ್ಲಿಯೇ ರಂಗಾಯಣವು ನಗರದ ಜನರಿಗೆ ಹೊಸ ಹೊಸ ನಾಟಕಗಳ ಸುಗ್ಗಿಯನ್ನು ನೀಡಲು ಪ್ರತಿವರ್ಷ ರಾಷ್ಟ್ರಮಟ್ಟದ ಹಬ್ಬವನ್ನು ಆಚರಿಸುತ್ತಾ ಬಂದಿದ್ದು, ಅದುವೇ ಬಹುರೂಪಿ ನಾಟಕೋತ್ಸವ.
ಒಂದೊಂದು ವರ್ಷದಲ್ಲಿ ವಿಭಿನ್ನ ವಿಷಯದ ಮೇಲೆ ಸಾಂಸ್ಕೃತಿಕ ಸಾಧಕರ ಕುರಿತು ನಾಟಕೋತ್ಸವ ನಡೆಸುವ ರಂಗಾಯಣ ಈ ಬಾರಿ ಜಗದ ಜಾನಪದ ಬಹುಮುಖಿ ಶೇಕ್ಸ್ಪಿಯರ್ ಹೆಸರಿನಲ್ಲಿ ಈ ಉತ್ವವವನ್ನು 6 ದಿನಗಳ ಕಾಲ ಏರ್ಪಡಿಸಿದ್ದು, ಅದಕ್ಕಾಗಿ ರಂಗಾಯಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಪರಿಸರ ಪೂರಕವಾದ ವಸ್ತುಗಳನ್ನು ಉಪಯೋಗಿಸಿ ಸುಂದರ ವಿನ್ಯಾಸ ನಿರ್ಮಿಸಲಾಗಿದೆ. ಈ ಬಾರೊ ಯಾವುದೇ ಫ್ಲೆಕ್ಸ್ ಅಳವಡಿಸದಿರುವುದು ವಿಶೇಷ.
ರಂಗೋತ್ಸವದಲ್ಲಿ ಬರೀ ನಾಟಕಗಳು ಮಾತ್ರವೇ ನಡೆಸುತ್ತಿಲ್ಲ. ಇದರ ಜತೆಗೆ ವಿವಿಧ ಭಾಷೆಯ ಚಲನಚಿತ್ರ ಪ್ರದರ್ಶನ, ರಂಗದ ಮಹತ್ವ ಹಾಗೂ ಸಮಸ್ಯೆಗಳ ಕುರಿತಾದ ವಿಚಾರ ಸಂಕಿರಣ, ಪುಸ್ತಕ ಮೇಳ ಹಾಗೂ ಕೈಮಗ್ಗ ಹಾಗೂ ಕರಕುಶಲ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ನಾಡಿನ ಹಲವು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿರುವ ವಿಭಿನ್ನ ಬಗೆಯ ದೇಸೀಯ ವಸ್ತುಗಳ ಮಾರಾಟ ಹಮ್ಮಿಕೊಳ್ಳಲಾಗಿದೆ . ಇದಕ್ಕಾಗಿ ಆವರಣದಲ್ಲಿ ಮಳಿಗೆಗಳನ್ನು ತೆರೆಯಲು ಸಜ್ಜು ನಡೆದಿದೆ.
ವೃತ್ತಿಪರ ಹಾಗೂ ಹವ್ಯಾಸಿ ನಾಟಕ ತಂಡಗಳ ಸಮಾಗಮವಾಗಿರುವ ರಂಗಹಬ್ಬದಲ್ಲಿ ಕರ್ನಾಟಕ ಅಲ್ಲದೆ ಅಸ್ಸಾಂ, ರಾಜಸ್ತಾನಿ ಹಾಗೂ ಮಹಾರಾಷ್ಟ್ರ ರಾಜ್ಯಗಳ 11 ನಾಟಕಗಳ ಪ್ರದರ್ಶನವಿದೆ. ಸುಮಾರು 140ಕ್ಕೂ ಹೆಚ್ಚಿನ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸುತ್ತಿದ್ದಾರೆ. ಬೀದಿ ನಾಟಕಗಳ ಪ್ರದರ್ಶನಕ್ಕೆ ಹವ್ಯಾಸಿ ತಂಡಗಳಿಗೆ ಅವಕಾಶ ಕಲ್ಪಿಸಿದ್ದು, ಜನಮನ, ರಂಗಹೆಜ್ಜೆ, ಪರಸ್ಪರ, ಏಕತಾರಿ, ರಂಗಸಂಗಮ ಹಾಗೂ ನೆಲೆ ಹಿನ್ನೆಲೆ ತಂಡಗಳು ಭಾಗವಹಿಸುತ್ತಿವೆ.
ಪ್ರಮುಖ ಆಕರ್ಷಣೆ: ಜಾನಪದ ಉತ್ಸನ ಸಹ ಇದರ ಪ್ರಮುಖ ಆಕರ್ಷಣೆಯಾಗಿದ್ದು, ತಮಟೆವಾದನ, ಮಹಿಳಾ ವೀರಗಾಸೆ, ಕಂಗೀಲು ನೃತ್ಯ, ಜಾನಪದ ಗಾಯನ, ಡೊಳ್ಳು ಕುಣಿತ, ಪೂಜಾ ಕುಣಿತ, ಜಗ್ಗಲಿಗೆ, ಕರಗ ಕುಣಿತ, ನೀಲಗಾರರ ಮೇಳ, ಕೋಲಾಟ, ಹಾಲಕ್ಕಿ ಸುಗ್ಗಿ ಕುಣಿತ, ಗೊಂದಲಿಗರ ಮೇಳ, ತಾಸಾರಾ ರಂಡೋಲ್, ಕಂಸಾಳೆ ಹಾಗು ಜನಪದ ಗಾಯನ ಮೋಡಿ ಮಾಡಲಿದೆ.
ರಂಗಸ್ಮರಣೆಯ ರುವಾರಿ ಶೇಕ್ಸ್ಸ್ಪಿಯರ್ ಅವರನ್ನು ಕುರಿತಾಗಿ ವಸ್ತು ಪ್ರದರ್ಶನ ಏರ್ಪಡಿಸಿರುವುದು ಒಂದು ವಿಶೇಷವಾಗಿದ್ದರೆ, ಈ ನಾಟಕೋತ್ಸವ ಉದ್ಘಾಟಿಸಲು ಆಗಮಿಸುತ್ತಿರುವ ಪ್ರಖ್ಯಾತ ನಟ ನಾಸಿರುದ್ದೀನ್ ಷಾ ತಂಡದವರು ಬೀಸ್ಟ್ಲಿ ಟೇಲ್ಸ್ ನಾಟಕ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷ.
ಬಹುರೂಪಿ ನಾಟಕೋತ್ಸವವು ಜ.13ರಿಂದ 18ರವರೆಗೆ ಆರು ದಿನಗಳ ಕಾಲ ವೈವಿಧ್ಯಮಯವಾಗಿ ನಡೆಯಲಿದ್ದು, ಕಲಾಪ್ರಿಯರಿಗೆ ರಸದೌತಣ ನೀಡಲಿದೆ.
ಮಾ. ವೆಂಕಟೇಶ್