ಜಿಲ್ಲಾ ಸುದ್ದಿ

ಫೇಸ್‌ಬುಕ್‌ನಲ್ಲಿ ಮೊಲ ಹಿಡಿದ ಫೋಟೋ ಅಪ್‌ಲೋಡ್; ಬಂಧನಕ್ಕೆ ಸೂಚನೆ

Vishwanath S

ಸೋಮವಾರಪೇಟೆ: ಸಾಮಾಜಿಕ ತಾಣಗಳು ಎಷ್ಟು ಉಪಯುಕ್ತವೋ, ಕೆಲವೊಮ್ಮೆ ಅಷ್ಟೇ ಮಾರಕವಾಗುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹೆಗಲಲ್ಲಿ ಏರ್‌ಗನ್ ಇಟ್ಟುಕೊಂಡು, ಕೈಯಲ್ಲಿ ಮೊಲ ಹಿಡಿದ ಯುವಕ ತನ್ನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ, ಈಗ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿರುವ ಪ್ರಕರಣ ಸೋಮವಾರಪೇಟೆ ಸಮೀಪದ ನಾಡ್ನಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ನಾಡ್ನಳ್ಳಿ ಗ್ರಾಮಕ್ಕೆ ಆಗಮಿಸಿದ ದರ್ಶನ್ ಎಂಬ ಯುವಕ ತನ್ನ ಸ್ನೇಹಿತರಾದ ನಾಡ್ನಳ್ಳಿ ಗ್ರಾಮದ ನವೀನ್, ಗುರುಪ್ರಸಾದ್, ಸುರೇಶ್, ಚಂದ್ರಶೇಖರ್, ರಾಜೇಶ್ ಅವರೊಂದಿಗೆ ಪಕ್ಕದ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿದ್ದ. ಮೊಲವನ್ನು ಕೈಯಲ್ಲಿ ಹಿಡಿದು ದರ್ಶನ್, ಹೆಗಲಿನಲ್ಲಿ ಏರ್‌ಗನ್ ಇಟ್ಟುಕೊಂಡು ತನ್ನ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದಾನೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ(1972) ಪ್ರಕಾರ ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುವಂತೆ, ಪುಷ್ಪಗಿರಿ ವನ್ಯಜೀವಿ ವಲಯಾರಣ್ಯಧಿಕಾರಿ ಚಂಗಪ್ಪ ಅವರಿಗೆ ಸೂಚಿಸಿದೆ. ಮಂಗಳವಾರ ನಾಡ್ನಳ್ಳಿ ಗ್ರಾಮಕ್ಕೆ ತೆರಳಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಆರೋಪಿಗಳ ಬಂಧನಕ್ಕೂ ಬಲೆ ಬೀಸಿದ್ದಾರೆ.

SCROLL FOR NEXT