ಜಿಲ್ಲಾ ಸುದ್ದಿ

ಸಂಶೋಧನೆಯಿಂದ ವಿವಿಗಳು ದೂರ

Srinivasamurthy VN

ತುಮಕೂರು: ಭಾರತದ ವಿಶ್ವ ವಿದ್ಯಾಲಯಗಳು ಸಂಶೋಧನಾ ಸಂಸ್ಕೃತಿಯಿಂದ ದೂರ ಹೋಗಿವೆ ಎಂದು ಯುಜಿಸಿ ಉಪಾಧ್ಯಕ್ಷ ಪ್ರೊ.ಎಚ್. ದೇವರಾಜ್ ವಿಷಾದಿಸಿದರು.

ತುಮಕೂರು ವಿವಿಯ 8ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು,ಭಾರತದಲ್ಲಿ ನಶಿಸುತ್ತಿರುವ ಸಂಶೋಧನಾ ಚಟುವಟಿಕೆಗಳು ಮತ್ತೆ ಚಿಗುರಲು ವಿವಿಗಳ ಕಾಯ್ದೆಗೆ ತುರ್ತಾಗಿ ತಿದ್ದುಪಡಿ ಮಾಡಬೇಕಿದೆ.ಏಕೆಂದರೆ ಪ್ರಬಲ ಮತ್ತು ಪ್ರಗತಿ ಪರ ವಿಶ್ವ ವಿದ್ಯಾಲಯಗಳಿಲ್ಲದೆ ಪ್ರಬಲ ಹಾಗೂ ಪ್ರಗತಿಪರ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಸ್ವತಂತ್ರ್ಯ ಪೂರ್ವದಲ್ಲಿ ವಿದ್ಯಾಲಯಗಳು ಹಾಗೂ ಕಾಲೇಜುಗಳು ಅತ್ಯುತ್ತಮ ಸಂಶೋಧನಾ ಸಂಸ್ಕೃತಿ ಹೊಂದಿದ್ದವು. ಆ ಪರಂಪರೆ ಇಂದು ಇಲ್ಲವಾಗಿದೆ. ಆದರೆ ಈಗ ವಿದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಬೌದ್ಧಿಕ ಸವಾಲಿನ ಮತ್ತು ಸ್ಪರ್ಧಾತ್ಮಕ ಪರಿಸರದಲ್ಲಿ ಸಶೋಧನಾ ಚಟುವಟಿಕೆಗಳು ಹುಲುಸಾಗಿ ಬೆಳೆಯುತ್ತಿವೆ.ನಮ್ಮಲ್ಲಿ ಒಂದು ಸಮಯದಲ್ಲಿ ಪ್ರವರ್ಧಮಾನದಲ್ಲಿದ್ದ ಶಿಕ್ಷಕ-ಸಂಶೋಧಕರ ಸ್ಫೂರ್ತಿದಾಯಕ ಪರಂಪರೆಯ ಮರುಸ್ಮರಣೆಯ ಅಗತ್ಯವಿದೆ.

ನಮ್ಮ ಕಾಲೇಜು ವಿವಿಗಳಲ್ಲಿ ಬೋಧಿಸಿದ, ಸಂಶೋಧನೆ ನಡೆಸಿದ ವ್ಯಕ್ತಿಗಳಗಾದ ಜೆ.ಸಿ. ಬೋಸ್, ಪಿ.ಸಿ. ರೇ, ಪ್ರೊ.ಸಿ.ವಿ. ರಾಮ ನ್, ಸರ್ವೇಪಲ್ಲಿ ರಾಧಾಕೃಷ್ಣನ್ ಅಂತಹವರ ನೆನಪು ಪುನಃ ಆಗಬೇಕಿದೆ ಎಂದರು. ಸತ್ಯಾನ್ವೇಷಣೆಗೆ ಮುಕ್ತ ವಾತಾವರಣವಿಲ್ಲದೆ ಪ್ರಬಲ ವಿವಿಗಳಿರಲು ಸಾಧ್ಯವಿಲ್ಲ. ಜ್ಞಾನ, ತಿಳಿವಳಿಕೆ, ವಿನಯ, ಪ್ರಶ್ನಿಸುವ ಛಾತಿ, ಹೊಸದನ್ನು ಹುಡುಕುವ ಹುರುಪು, ಹಳೆಯದನ್ನು ವಿಮರ್ಶಿಸುವ ಹಾಗೂ ಪುನಃ ನವೀಕರಿಸುವ ಕಲೆ ಇವೆಲ್ಲಾ ಒಟ್ಟಂದದಲ್ಲಿ ಇರುವ ಗುಣಗಳು.

ವಿವಿಗಳಿಗೆ ಜೀವದಾಯಕವಾದ ಸೆಲೆಗಳು. ಇಂತಹ ವಾತಾವರಣದಲ್ಲಿ ಮಾತ್ರ ಶಾಸನದ ಬಗ್ಗೆ ಗೌರವ ಸಚ್ಛಾರಿತ್ರ್ಯ ಮತ್ತು ಶೀಲಕ್ಕೆ ಬೆಲೆಯಿರುವುದು ಎಂದು ಮಾರ್ಮಿಕವಾಗಿ ನುಡಿದರು.

ಬದುಕಿನ ಮೂಲಭೂತ ಆದರ್ಶಗಳು, ಸತ್ಯಾನ್ವೇಷಣೆಯ ತವಕ ಮತ್ತು ಆಚಾರವಂತಿಕೆಗಳನ್ನು ಪುಸ್ತಕಗಳಲ್ಲಿ ಬರೆದು ಅಂಕುರಿಸಲಾಗುವುದಿಲ್ಲ. ನಮ್ಮ ಆದರ್ಶಗಳು ಮತ್ತು ದೇಶಾಭಿಮಾನ ನಮ್ಮ ಆಚಾರಗಳಲ್ಲಿ ಒಡಮೂಡಬೇಕೆ ವಿನಃ ಬರೀ ಮಾತುಗಳಲ್ಲಲ್ಲ. ಹಾಗಾಗಿ ವಿವಿಗಳು ಉದಾರ ಮನೋಭಾವದ ಶಿಕ್ಷಣವನ್ನು, ಉನ್ನತ ವೈಜ್ಞಾನಿಕ ಸಂಶೋಧನೆಯನ್ನು ಜತೆ ಜತೆಗೇ ನೀಡಬೇಕು ಎಂದು ಅಭಿಪ್ರಾಯಪಟ್ಟರು.

SCROLL FOR NEXT