ಜಿಲ್ಲಾ ಸುದ್ದಿ

ಶೋಷಿತರು ಮೇಲೆಳದೇ ಸಮಾನತೆ ಬಾರದು: ಬರಗೂರು

Srinivas Rao BV

ಬೆಂಗಳೂರು: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹರಣವಾಗುತ್ತಿದ್ದರೂ ಬಹುಪಾಲು ಬಡವರು ದನಿಯೆತ್ತಲಿಲ್ಲವೆಂದ ಮಾತ್ರಕ್ಕೆ ಅವರನ್ನು ಅವಿವೇಕಿಗಳೆಂದು ಕರೆಯಲು ಸಾಧ್ಯವಿಲ್ಲ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಮುದಾಯ ಹಾಗೂ ಡಿಐಎಎಫ್ ಐ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ-ಸ್ವಾತಂತ್ರ್ಯ ಸಮಾನತೆ ಸಮಕಾಲೀನ ಸವಾಲುಗಳು ಕುರಿತ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಾಕ್ ಸ್ವಾತಂತ್ರ್ಯ ದಮನ, ಪತ್ರಿಕಾ ಸ್ವಾತಂತ್ರ್ಯ ಹರಣವಾಗಿತ್ತು. ಸ್ವಾತಂತ್ರ್ಯದ ಪರಿವೆಯೇ ಇಲ್ಲದ ಮುಗ್ಧರಿಗೆ ಸ್ವಾತಂತ್ರ್ಯ ಹರಣದ ಬಗ್ಗೆ ಹೇಗೆ ತಾನೇ ತಿಳಿಯಬೇಕು ಎಂದು ಪ್ರಶ್ನಿಸಿದರು.

ಸಂವಿಧಾನದತ್ತವಾಗಿ ಬಂದಿರುವ ಹಕ್ಕುಗಳನ್ನು ಸಾಮಾನ್ಯನ ಅನುಭವಕ್ಕೆ ಬಂದಾಗ ಪ್ರಜಾಪ್ರಭುತ್ವ ದೇಶವಾಗಲು ಸಾಧ್ಯ. ಇಲ್ಲವಾದಲ್ಲಿ ಆಳುವ ವರ್ಗದವರೇ ಬಡವರ ಎಲ್ಲಾ ಸ್ವಾತಂತ್ರ್ಯವನ್ನು ಕಿತ್ತುಕೊಂಡಾಗ ಇಲ್ಲದಿರುವ ಹಕ್ಕುಗಳ ಬಗ್ಗೆ ಬಡವರು ಹೇಗೆ ತಾನೇ ದನಿಯೆತ್ತಲು ಸಾಧ್ಯ ಎಂದರು.

ದೇಶದಲ್ಲಿ 1 ಕೋಟಿ 78 ಲಕ್ಷ ಜನ ಕೈಯಲ್ಲಿ ಮಲ ಎತ್ತುತ್ತಿದ್ದಾರೆ. 8 ಕೋಟಿ ಜನ ತಲೆಯಲ್ಲಿ ಮರಹೊರುತ್ತಿದ್ದಾರೆ. ಕರ್ನಾಟಕದಲ್ಲೇ 15 , 375 ಜನ ಮಲವೆತ್ತುತ್ತಿದ್ದಾರೆ. ಹೀಗೆ ಕೆಳವರ್ಗದವರ ಬದುಕು ದುಸ್ತರವಾಗಿರುವಾಗ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಂಡರೆ ಪ್ರಯೋಜನವೇನು ಇದರಿಂದ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಆನಂದ್ ಪಟವರ್ಧನ್ ಅವರ ಪ್ರಿಸನರ್ಸ್ ಆಫ್ ಕಾನ್ಸಿಯನ್ಸ್ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ವಿ.ಕೆ.ಜೆ ನಾಯರ್ ಸಮುದಾಯದ ಮಾಜಿ ಮುಖ್ಯ ಕಾರ್ಯದರ್ಶಿ ಎಂ.ಜಿ ವೆಂಕಟೇಶ್, ಸುರೇಂದ್ರ ರಾವ್ ಉಪಸ್ಥಿತರಿದ್ದರು.

SCROLL FOR NEXT