ಜಿಲ್ಲಾ ಸುದ್ದಿ

ವಿವಿಐಪಿಗಳಿಗಾಗಿ 34 ಮರ ನಾಶ

Mainashree

ಬೆಂಗಳೂರು: ಅನುಮತಿ ಪಡೆಯದೆ ಕುಮಾರಕೃಪ ಅತಿಥಿಗೃಹದ ಬಳಿ 34 ಮರ ಕಡಿದ ಲೋಕೋಪಯೋಗಿ ಇಲಾಖೆಗೆ ಅರಣ್ಯ ಇಲಾಖೆ ನೋಟಿಸ್ ನೀಡಲಿದೆ.

ಅತಿಥಿಗೃಹದ ಬಳಿಯಿರುವ ಪ್ರದೇಶ ದಲ್ಲಿ ವಿವಿಐಪಿಗಳಿಗಾಗಿ ಲೋಕೋಪಯೋಗಿ ಇಲಾಖೆ, ಸುಮಾರು 200 ಕೊಠಡಿಗಳಿರುವ ಅತಿಥಿಗೃಹ ನಿರ್ಮಿಸುತ್ತಿದೆ. ಇದಕ್ಕಾಗಿ ಒಟ್ಟು 46 ಮರಗಳನ್ನು ಕಡಿಯಲು ಗುರುತಿಸಿದ್ದು, ಮೂರು ದಿನಗಳ ಹಿಂದೆ 34 ಮರ ಕಡಿದು ಹರಾಜು ಹಾಕಲಾಗಿದೆ.

ಆದರೆ, ಅರಣ್ಯ ಕಾಯ್ದೆಯ ನಿಯಮಗಳ ಪ್ರಕಾರ ಮುಂಚಿತವಾಗಿ ಇಲಾಖೆಯಿಂದ ಅನುಮತಿ ಪಡೆಯದೆ ಉತ್ತಮ ಜಾತಿಯ ಹಾಗೂ ಬೆಲೆ ಬಾಳುವ ಮರಗಳನ್ನು ಹನನ ಮಾಡಲಾಗಿದೆ ನಂತರ ಹರಾಜು ಹಾಕುವಾಗಲೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಕಡಿದ ಮರಗಳನ್ನು ಸ್ಥಳದಲ್ಲೇ ಬಿಡಲಾಗಿದೆ. ಕೆಲವು ಮರದ ದಿಮ್ಮಿಗಳನ್ನು ಸ್ಥಳದಿಂದ ಹೊತ್ತೊಯ್ಯಲಾಗಿದೆ.

ಬುಡ ತುಂಡರಿಸಿದ ಪ್ರತಿ ಮರಗಳನ್ನು ಅರಣ್ಯ ಸಿಬ್ಬಂದಿ ಗುರುತಿಸಿದ್ದು, ಯಾವ ಜಾತಿಯ ಮರಗಳು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಆರ್ ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಹಾಗೂ ವಕೀಲ ಉಮಾಪತಿ ಅವರ ತಂಡ ಅರಣ್ಯ ಇಲಾಖೆಗೆ ಈ ವಿಚಾರ ತಿಳಿಸಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸತ್ಯ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾವು, ಹಲಸು, ಸುಮಾರು 11 ತೆಂಗಿನ ಮರಗಳು ಸೇರಿದಂತೆ 46 ಮರಗಳನ್ನು ಗುರುತಿಸಲಾಗಿದೆ. ಅನುಮತಿ ಪಡೆಯದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಉತ್ತರಿಸಬೇಕಿದ್ದು, ಅಲ್ಲಿಯವರೆಗೂ ಉಳಿದ ಮರಗಳನ್ನುಕಡಿಯುವಂತಿಲ್ಲ ಎನ್ನುತ್ತಾರೆ ಅರಣ್ಯಇಲಾಖೆ ಅಧಿಕಾರಿಗಳು.

SCROLL FOR NEXT