ಕೆಲ ಲಘು ಪ್ರಕರಣಗಳ ವಿಲೇವಾರಿ ಇನ್ನು ಆಯುಕ್ತರ ಕಚೇರಿಯಲ್ಲೇ, ತುರ್ತು ಸಂದರ್ಭಗಳಲ್ಲಿ ಗಲಭೆ ನಿಯಂತ್ರಣಕ್ಕೆ ನಿಷೇಧಾಜ್ಞೆ ಹೊರಡಿಸಬಹುದು
ಬೆಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ `ಮ್ಯಾಜಿಸ್ಟ್ರೇಟ್ ಅಎಂ.ಎನ್.ರೆಡ್ಡಿಧಿಕಾರ' ಚಲಾವಣೆಗೆ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಕಾಂಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯನ್ವಯ ಕೆಲ ಲಘು ಪ್ರಕರಣಗಳ ವಿಲೇವಾರಿ ಇನ್ನು ಮುಂದೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೇ ನಡೆಯಲಿದೆ.
ಸಿಆರ್ಪಿಸಿ ಕಲಂ 107ರಿಂದ 111 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55 ಮತ್ತು 56ರ ಅನ್ವಯ ಮ್ಯಾಜಿಸ್ಟ್ರೇಟ್ ಅಧಿಕಾರ ಚಲಾವಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಅವಕಾಶ ಇದೆ. ಇದರೊಂದಿಗೆ ತುರ್ತು ಸಂದರ್ಭಗಳಲ್ಲಿ ಸಂಭವನೀಯ ಗಲಾಟೆ, ಗಲಭೆಗಳ ನಿಯಂತ್ರಣಕ್ಕೆ ನಿಷೇಧಾಜ್ಞೆ ಹೊರಡಿಸುವ ಅಧಿಕಾರವನ್ನೂ ಈ ಇಬ್ಬರು ಅಧಿಕಾರಿಗಳು ಹೊಂದಿರುತ್ತಾರೆ. ಈ ಹಿಂದೆ ನಗರ ಪೊಲೀಸ್ ಆಯುಕ್ತರು ಮಾತ್ರ ನಿಷೇಧಾಜ್ಞೆ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದರು.
ನಗರ ವ್ಯಾಪ್ತಿ ಹೆಚ್ಚಿದ್ದು ಅಪರಾಧ ಪ್ರಕರಣಗಳಸ್ವರೂಪ ವಿಶಾಲವಾಗಿರುವುದರಿಂದ ಅಧಿಕಾರದ ಅಗತ್ಯತೆ ಮನಗಂಡು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ಕಲ್ಪಿಸಿ ಸರ್ಕಾರ ಆದೇಶ ನೀಡಿದೆ. ರೌಡಿಗಳ ನಿಯಂತ್ರಣ: ನಗರದಲ್ಲಿ ರೌಡಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ನಗರ ಪೊಲೀಸರು ಆಗಾಗ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಾರೆ.
ಈ ವೇಳೆ ಹಿರಿಯ ಅಧಿಕಾರಿಗಳ ಮುಂದೆ ರೌಡಿಗಳು ಪರೇಡ್ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುತ್ತಾರೆ. ಆದರ ಬದಲು ಮ್ಯಾಜಿಸ್ಟ್ರೇಟ್ ಅಧಿಕಾರ ಇದ್ದಲ್ಲಿ ಅದಕ್ಕೆ ಕಾನೂನಿನ ಮಾನ್ಯತೆ ಹೆಚ್ಚಿರುತ್ತದೆ. ಮುಚ್ಚಳಿಕೆ ಬರೆದುಕೊಟ್ಟ ವ್ಯಕ್ತಿ ಏನಾದರೂ ಅಪರಾಧ ಕೃತ್ಯದಲ್ಲಿ ಭಾಗಿಯಾದಲ್ಲಿ ಯಾವುದೇ ವಾರಂಟ್ ಇಲ್ಲದೇ ಬಂಧಿಸಲು ಅವಕಾಶ ಇರುತ್ತದೆ.
ನಗರದಲ್ಲಿ ಶಾಂತಿ ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯ. ಅದಕ್ಕೆ ಪೊಲೀಸಿರ ಜತೆಗೆ ಮುಂಜಾಗ್ರತೆ ಕ್ರಮಗಳು ಅಗತ್ಯ. ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ ಆರೋಪಿಗಳನ್ನು ನ್ಯಾಯಾಧೀಶರ ಬಳಿ ಕರೆದೊಯ್ಯಲು ಸಾಕಷ್ಟು ಸಮಯ ಜತೆಗೆ ಸಿಬ್ಬಂದಿಯೂ ಬೇಕು. ಈ ಸಮಸ್ಯೆಯನ್ನು ಮ್ಯಾಜಿಸ್ಟ್ರೇಟರ ಅಧಿಕಾರ ತಪ್ಪಿಸಲಿದೆ. ಆರೋಪಿಗಳು ಸಣ್ಣಪುಟ್ಟ ರೌಡಿಸಂ, ಪೆಟ್ಟಿ ಕೇಸ್ ಗಳಲ್ಲಿ ಭಾಗಿಯಾಗಿದ್ದಲ್ಲಿ ಅವರಿಗೆ ಹಣದ ರೂಪದಲ್ಲಿ ದಂಡವನ್ನು ಕೂಡಾ ವಿಧಿಸಬಹುದಾಗಿದೆ.
ಈಗಾಗಲೇ ಕಮಿಷನರ್ ಕಚೇರಿಗೆ ಆರೋಪಿಗಳನ್ನು ಕರೆತಂದು ಎಚ್ಚರಿಕೆ ನೀಡಿ ದಂಡ ವಿಧಿಸಲಾಗುತ್ತಿದೆ. ಇದು ಇನ್ನು ಮುಂದೆ ವ್ಯವಸ್ಥಿತವಾಗಿ ಕೋರ್ಟ್ ಹಾಲ್ ಮಾದರಿಯಲ್ಲೇ ನಡೆಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಕಳೆದ ವರ್ಷ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ 3 ಕಮಿಷನರೇಟ್ ವ್ಯಾಪ್ತಿಯ ಎಲ್ಲ ಡಿಸಿಪಿಗಳಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೌಡಿಗಳಿದ್ದು ಕೇವಲ ಒಬ್ಬರೇ ಅಧಿಕಾರಿ ಎಲ್ಲವನ್ನೂ ನಿರ್ವಹಿಸಲಾಗದು. ಇದನ್ನು ಮನಗಂಡ ಸರ್ಕಾರ ಇಬ್ಬರು ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿದೆ. ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳು, ಮುಂಜಾಗ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯ ಎಂದು ಆಯುಕ್ತ ಎಂ.ಎನ್.ರೆಡ್ಡಿ ಹೇಳಿದರು.