ಜಿಲ್ಲಾ ಸುದ್ದಿ

ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ

Srinivasamurthy VN

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ವಿಮಾನದ ಮೂರು ಚಕ್ರಗಳು ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದ ಸ್ಪೈಸ್ ಜೆಟ್ ವಿಮಾನ ರನ್ ವೇಯಲ್ಲಿ ಇಳಿಯುವಾಗ ವಿಮಾನ ಸ್ಕಿಡ್ ಆದ ಪರಿಣಾಮ ಮೂರು ಚಕ್ರಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಯಾವೊಬ್ಬ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ಇದೇ ವಿಮಾನದಲ್ಲಿ ವಾರ್ತಾ ಸಚಿವ ರೋಷನ್ ಬೇಗ್ ಕೂಡ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದ್ದು, ಅವರೊಂದಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಎಲ್ಲ 78 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ವಿಮಾನದ ಚಕ್ರಗಳು ಸ್ಫೋಟಗಗೊಳ್ಳುತ್ತಿದ್ದಂತೆಯೇ ವಿಮಾನ ರನ್ ವೇ ಬಿಟ್ಟು ಚಲಿಸಿದ್ದು, ಈ ವೇಳೆ ವಿಮಾನಕ್ಕೆ ಬೆಂಕಿ ತಗಲುವ ಅಪಾಯವಿತ್ತು. ಅದೃಷ್ಟವಶಾತ್ ವಿಮಾನಕ್ಕೆ ಬೆಂಕಿ ತಗುಲಿಲ್ಲ. ಹೀಗಾಗಿ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆಯಲ್ಲಿ ಸ್ಪೈಸ್ ಜೆಟ್ ವಿಮಾನದ ಎಲ್ಲ 3 ಚಕ್ರಗಳು ಸ್ಫೋಟಗೊಂಡಿದ್ದು, ವಿಮಾನದ ಕೆಲ ಭಾಗಗಳಿಗೆ ಹಾನಿಯಾಗಿದೆ.

ಪ್ರಸ್ತುತ ಘಟನಾ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಘಟನೆ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ವಿಮಾನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಊಹಾಪೋಹಗಳು ಎದ್ದಿದ್ದು, ಹವಾಮಾನ ವೈರೀತ್ಯವೇ ದುರಂತಕ್ಕೆ ಕಾರಣ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಅಸಮರ್ಪಕ ರನ್ ವೇ ನಿರ್ವಹಣೆಯೇ ದುರಂತಕ್ಕೆ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT