ಜಿಲ್ಲಾ ಸುದ್ದಿ

ತಹಶೀಲ್ದಾರ್ ಮೇಲೆ ಲಾರಿ ಹರಿಸಿ ಕೊಲೆಗೆ ಯತ್ನ

Srinivasamurthy VN

ಬಳ್ಳಾರಿ: ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಬೆನ್ನಲ್ಲೇ ಮತ್ತೋರ್ವ ಅಧಿಕಾರಿ ಮೇಲೆ ದುಷ್ಕರ್ಮಿಗಳು ಕೊಲೆ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಲೋಡ್ ಮಾಡುತ್ತಿದ್ದ ಮರುಳು ದಂಧೆಕೋರರು ತಹಶೀಲ್ದಾರ್ ಎಚ್ ವಿಶ್ವನಾಥ್ ಮೇಲೆ ಲಾರಿ ಹರಿಸುವ ಮೂಲಕ ಕೊಲೆಗೆ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಿರೇಬನ್ನಿಮಟ್ಟಿ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ತಹಶೀಲ್ದಾರ್ ಎಚ್ ವಿಶ್ವನಾಥ್ ಮಾ.16 ಮಂಗಳವಾರ ರಾತ್ರಿ ತಮ್ಮ ಸಿಬ್ಬಂದಿಯೊಂದಿಗೆ ಅಕ್ರಮವಾಗಿ ಮರುಳು ಸಾಗಿಸುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮರುಳು ಸಾಗಿಸುತ್ತಿದ್ದ ಲಾರಿಯೊಂದು ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಅದನ್ನು  ತಮ್ಮ ಜೀಪಿನಲ್ಲಿ ಬೆನ್ನೆಟ್ಟಿ ಹಿಡಿಯಲು ವಿಶ್ವನಾಥ್ ಯತ್ನಿಸಿದರು.

ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಹೌಸಿ ಮತ್ತು ಹಿರೇಬನ್ನಿಮಟ್ಟಿ ಮಾರ್ಗ ಮಧ್ಯದಲ್ಲಿ ಲಾರಿ ಚಾಲಕ ತಹಶೀಲ್ದಾರ್ ಇದ್ದ ಜೀಪಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ವಿಶ್ವನಾಥ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ದಾಳಿ ವೇಳೆ  ವಿಶ್ವನಾಥ್ ಅವರು ಒಟ್ಟು ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸರ ವಶಕ್ಕೆ ನೀಡಿದ್ದಾರೆ. ಲಾರಿ ಚಾಲಕನ ವಿರುದ್ಧ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ ಜಿಲೆಯ ಹಲವು ಗ್ರಾಮಗಳಲ್ಲಿ ಮರಳು ದಂಧೆಕೋರರು ಅಕ್ರಮವಾಗಿ ಮರಳು ಸಾಗಾಟದಲ್ಲಿ ತೊಡಗಿದ್ದು, ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿ, ಕಾಳೆನಹಳ್ಳಿ, ಮೈಲಾರ, ಹಿರೇಬನ್ನಿಮಟ್ಟಿ ದಾಳಿ ನಡೆಸಿದ ಅಧಿಕಾರಿಗಳು 19 ಟ್ರ್ಯಾಕ್ಟರ್, 5ಲಾರಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಅಲ್ಲದೆ ಸುಮಾರು 1.20 ಲಕ್ಷ ರೂ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT