ಜಿಲ್ಲಾ ಸುದ್ದಿ

ಸ್ಯಾಂಕಿ ಕೆರೆಯಲ್ಲಿ ಶವ ಪತ್ತೆ

ಬೆಂಗಳೂರು: ಕಾರ್ಮಿಕ ಇಲಾಖೆ ಇನ್ಸ್‍ಪೆಕ್ಟರ್ ಶಿವಶಂಕರಪ್ಪ ಅವರ ಪುತ್ರ ಸುಪ್ರಿತ್(23) ಭಾನುವಾರ ಬೆಳಗ್ಗೆ ಸದಾಶಿವನಗರದ ಸ್ಯಾಂಕಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಚಿಕ್ಕಮಗಳೂರು ಮೂಲದ ಶಿವಶಂಕರಪ್ಪ, ಪತ್ನಿ ಶಶಿಕಲಾ ಹಾಗೂ ಇಬ್ಬರು ಮಕ್ಕಳ ಜತೆ ಹಲವು ವರ್ಷಗಳಿಂದ ಮಹಾಲಕ್ಷ್ಮಿ ಬಡಾವಣೆಯ ಶಂಕರ ನಗರದಲ್ಲಿ ವಾಸಿಸುತ್ತಿದ್ದರು. ಶಿವಶಂಕರಪ್ಪ ಅವರ ಮಗ ಸುಪ್ರೀತ್ ದ್ವಿತೀಯ ಪಿಯು ಅನುತ್ತೀರ್ಣನಾಗಿದ್ದು ಕೆಲಸವಿರಲಿಲ್ಲ.

ಮಾ.27 ಸಂಜೆ 4 ಗಂಟೆ ಸುಮಾರಿಗೆ ತನ್ನ ಮೊಬೈಲ್ ಫೋನ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಮನೆಯಿಂದ ಹೊರಗೆ ಹೊಗಿದ್ದ. ಆದರೆ, ವಾಪಸಾಗಿರಲಿಲ್ಲ. ರಾತ್ರಿ ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ಪಾಲಕರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಹಾಲಕ್ಷ್ಮಿ ಬಡಾವಣೆ ಠಾಣೆಗೆ ತೆರಳಿ, ನಾಪತ್ತೆ ದೂರು ಕೊಟ್ಟಿದ್ದರು. ಆದರೆ, ದೂರು ನೀಡುವ ಮೊದಲೇ ಸುಪ್ರಿತ್ ಶವ ಸ್ಯಾಂಕಿ ಕೆರೆಯಲ್ಲಿ ಪತ್ತೆಯಾಗಿತ್ತು.

ಬೆಳಿಗ್ಗೆ 8 ಗಂಟೆಗೆ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ವಾಯುವಿಹಾರಿಗಳು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ಶವವನ್ನು ಹೊರ ತೆಗೆಯಲಾಯಿತು. ಮೃತರ ಪ್ಯಾಂಟಿನ ಜೇಬಿನಲ್ಲಿ ಸಿಕ್ಕ ಮೊಬೈಲ್, ನೀರು ತುಂಬಿಕೊಂಡು ಹಾಳಾಗಿತ್ತು. ಅದರಲ್ಲಿದ್ದ ಸಿಮ್ ಕಾರ್ಡನ್ನು ಬೇರೆ ಮೊಬೈಲ್‍ಗೆ ಹಾಕಿದಾಗ ಮೃತರ ಅಕ್ಕನ ಮಗನ ಮೊಬೈಲ್ ಸಂಖ್ಯೆ ದೊರೆಯಿತು. ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆವು ಎಂದು ಸದಾಶಿವನಗರ ಪೊಲೀಸರು ಮಾಹಿತಿ ನೀಡಿದರು.

ಪಿಯುಸಿಯಲ್ಲಿ ಅನುತ್ತೀರ್ಣನಾದ ಮಗ, ನಂತರ ಶಿಕ್ಷಣ ಮುಂದುವರಿಸಲಿಲ್ಲ. ಎರಡು ವರ್ಷ ಮನೆಯಲ್ಲೇ  ಕಳೆದ ಆತ, ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದ. ಇದರಿಂದ ನೊಂದು ಸುಪ್ರಿತ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸಾವಿನ ಬಗ್ಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಶಿವಶಂಕರಪ್ಪ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT