ಮೈಸೂರು: ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ಇರಿಸಲಾಗಿದ್ದ ರತ್ನಖಚಿತ ಸಿಂಹಾಸನಕ್ಕೆ ಹಾಕಲಾಗಿದ್ದ ಪರದೆಯನ್ನು ತೆರವುಗೊಳಿಸಲು ಯತ್ನಿಸಿದ ಅರಮನೆ ಮಂಡಳಿ ನಿರ್ದೇಶಕಿ ಬಿ.ಜಿ. ಇಂದಿರಮ್ಮ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ದೇವರಾಜ ಠಾಣೆ ಪೊಲೀಸರಿಗೆ ಶನಿವಾರ ಸಂಜೆ ದೂರು ನೀಡಿದ್ದಾರೆ.
ಪ್ರಮೋದಾದೇವಿ ಒಡೆಯರ್ ಆಪ್ತ ಸಹಾಯಕ ಲಕ್ಷ್ಮೀನಾರಾಯಣ್ ಮೂಲಕ ದೂರಿನ ಪ್ರತಿಯನ್ನು ದೇವರಾಜ ಪೊಲೀಸ್ ಠಾಣೆಗೆ ತಲುಪಿಸಿದ್ದು, ಧಾರ್ಮಿಕ ವಿಧಿವಿಧಾನಗಳು ಮುಗಿಯುವ ಮುನ್ನವೇ ಏಕಾಏಕಿ ಸಿಂಹಾಸನಕ್ಕೆ ಮುಚ್ಚಿದ್ದ ಬಟ್ಟೆಯನ್ನು ಇಂದಿರಮ್ಮ ಅವರು ತೆರವಿಗೆ ಯತ್ನಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.