ಜಿಲ್ಲಾ ಸುದ್ದಿ

14 ರಿಂದ ಸಹಕಾರ ಸಪ್ತಾಹ

Srinivas Rao BV

ಬೆಂಗಳೂರು: ಶತಮಾನಗಳಷ್ಟು ಭವ್ಯ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಪರಿಚಯಿಸಲು ಮತ್ತು ವಿಸ್ತರಿಸುವ ಸಲುವಾಗಿ 62ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನವೆಂಬರ್ 14ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 39,627 ಸಹಕಾರ ಸಂಘಗಳಿದ್ದು, 2.24 ಕೋಟಿ ಸದಸ್ಯರಿದ್ದಾರೆ.
ನವೆಂಬರ್ 14ರಂದು ಮೈಸೂರಿನಲ್ಲಿ ಸಪ್ತಾಹದ ಉದ್ಘಾಟನೆ ನೆರವೇರಲಿದ್ದು, ಆ ದಿನವನ್ನು ಉದ್ಯೋಗ ಮತ್ತು ನೈಪುಣ್ಯತೆಯ ಅಭಿವೃದ್ಧಿಯ ದಿನವನ್ನಾಗಿ ಆಚರಿಸಲಾಗುವುದು. ನವೆಂಬರ್ 15ರಂದು ಬೆಂಗಳೂರಿನಲ್ಲಿ ಸಹಕಾರಿ ಸಂಘಗಳು ಮತ್ತು ಆರ್ಥಿಕ ಸಾಕ್ಷರತೆಯ ದಿನಾಚರಣೆ, ನವೆಂಬರ್ 16ರಂದು ಚಿತ್ರದುರ್ಗದಲ್ಲಿ ಸ್ವಚ್ಛ ಭಾರತ ಅಭಿಯಾನ ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಸಹಕಾರ ಸಂಘಗಳ ಪಾತ್ರದ ದಿನಾಚರಣೆ, ನವೆಂಬರ್ 17ರಂದು ಚಿಕ್ಕಮಗಳೂರಿನಲ್ಲಿ ಸಹಕಾರಿ ಸಂಘಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಮತ್ತು ಸಹಕಾರ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ವಿರೋಧಿಸುವ ದಿನಾಚರಣೆ ಏರ್ಪಾಟಾಗಿದೆ.
ನವೆಂಬರ್ 18ರಂದು ಬೆಂಗಳೂರಿನಲ್ಲಿ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಶ್ರೇಷ್ಠದ ಸಹಕಾರಿಗಳಿಗೆ ಪ್ರದಾನ ಮಾಡುವರು. ನವೆಂಬರ್ 19ರಂದು ಸಹಕಾರಿ ಸಂಘಗಳ ಮೂಲಕ ಪ್ರಕೃತಿ ವಿಕೋಪಗಳ ನಿರ್ವಹಣೆ ಮತ್ತು ರೈತರಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಸಹಕಾರ ಸಂಘಗಳ ಪಾತ್ರದ ದಿನಾಚರಣೆ ಹಾಗೂ ನವೆಂಬರ್ 20ರಂದು ಸಹಕಾರ ಸಂಘಗಳ ಬಲವರ್ಧನೆಗಾಗಿ ಕಾನೂನು ಬಲಪಡಿಸುವ ದಿನಾಚರಣೆ ಆಯೋಜಿಸಲಾಗಿದೆ.

SCROLL FOR NEXT