ಜಿಲ್ಲಾ ಸುದ್ದಿ

ಹಿಂದೂಪರ ಸಂಘಟನೆಗಳ ಪ್ರತಿಭಟನೆ;ಕಾನೂನು ಉಲ್ಲಂಘಿಸಿದರೆ ಕಠಿಣಕ್ರಮ: ಪರಮೇಶ್ವರ್

Srinivasamurthy VN

ಬೆಂಗಳೂರು: ಕಾನೂನನ್ನು ಉಲ್ಲಂಘನೆ ಮಾಡಿ ಹಿಂಸೆಗಿಳಿಯುವ ಯಾರನ್ನೇ ಆದರೂ ಸರ್ಕಾರ ಕ್ಷಮಿಸುವುದಿಲ್ಲ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ  ಸಚಿವ ಡಾ. ಜಿ. ಪರಮೇಶ್ವರ್ ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ವಿಕಾಸಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 144 ರಲ್ಲಿ ಇಂದು ಬೆಳಗ್ಗೆ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಿದ ಗೃಹ ಸಚಿವ ಪರಮೇಶ್ವರ  ಅವರು, ಟಿಪ್ಪು ಜಯಂತಿ, ವಿಎಚ್ ಪಿ ಮುಖಂಡನ ಸಾವು ಮತ್ತು ಕೆಂಪೇಗೌಡರ ವಿರುದ್ಧ ಹೇಳಿಕೆ ಕುರಿತಂತೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ವಿಹೆಚ್‌ಪಿ ಕಾರ್ಯಕರ್ತರು  ಕೆಲವು ಜಿಲ್ಲೆಗಳಲ್ಲಿ ರಸ್ತೆ ತಡೆ, ಹೆದ್ದಾರಿ ತಡೆ ನಡೆಸುತ್ತಿದ್ದಾರೆ. ಅವರ ಪ್ರಾಬಲ್ಯ ಇರುವ ಕಡೆ ಮಾತ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೆಲವೆಡೆ ಮಾಡುತ್ತಿಲ್ಲ. ಪ್ರತಿಭಟನೆ ಸಂದರ್ಭದಲ್ಲಿ ಯಾರೇ  ಆಗಲಿ ಕಾನೂನನ್ನು ಕೈಗೆತ್ತಿಕೊಂಡರೆ ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಲ್ಲದೆ ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿ ಕಾರಿದ ಅವರು, ಬಿಜೆಪಿ ಶಾಸಕರು ಮತ್ತು ಕೆಲವು ಸಂಘಟನೆಗಳು ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಶಾಂತಿ ಕದಡುವ ಕೆಲಸ ಮಾಡಿದ್ದರಿಂದ  ಕೊಡಗು ಜಿಲ್ಲೆಯಲ್ಲಿ ಗುಂಪು ಘರ್ಷಣೆ ನಡೆದವು. ಜಯಂತಿ ಆಚರಣೆಗೆ ಸಹಕಾರ ನೀಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ನಾವೇ ಮಾಡಿಕೊಂಡ ಕಾನೂನುಗಳನ್ನು ಪ್ರತಿಯೊಬ್ಬರು  ಪಾಲಿಸಬೇಕು. ಅದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

SCROLL FOR NEXT