ಮಡಿಕೇರಿ/ಮಂಗಳೂರು: ಟಿಪ್ಪು ಜಯಂತಿ ಸಂದರ್ಭದ ಗಲಭೆಯಲ್ಲಿ ವಿಎಚ್ಪಿ ಮುಖಂಡ ಕುಟ್ಟಪ್ಪ ಸಾವಿನ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ನೆಲ್ಯಹುದಿಕೇರಿಯ ಅಬ್ದುಲ್ ಗಫÇರ್ ಮತ್ತು ಅರೆಕಾಡುವಿನ ಖಾಲಿದ್ ಬಂಧಿತರು.
ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಗಲಭೆ ವೇಳೆ ಜಿಲ್ಲಾ ಆಸ್ಪತ್ರೆಯ ಬಳಿ ಉದ್ರಿಕ್ತ ಗುಂಪಿನ ಕಲ್ಲೇಟಿಗೆ ಸಿಲುಕಿ ಗುಂಡಿಗೆ ಬಿದ್ದು ಮೃತಪಟ್ಟಿದ್ದರು. ಖಚಿತ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ನಡುವೆ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಬಸ್ನ ಮುಂಭಾಗದ ಗಾಜು ಪುಡಿಯಾಗಿದ್ದು ಚಾಲಕ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆ ಖಂಡಿಸಿ ಖಾಸಗಿ ಬಸ್ ಚಾಲಕರು ಅಪರಾಹ್ನದಿಂದ ಮಂಗಳೂರು-ಉಳ್ಳಾಲ ಮಧ್ಯೆ ಸಂಚಾರ ಸ್ಥಗಿತಗೊಳಿಸಿದ್ದರು. ಮತೀಯ ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ.