ಹಾಸನ: ಸಾಹಿತಿಗಳು ಹಾಗೂ ಹಿರಿಯರು ಜನರ ಭಾವನೆಗಳನ್ನು ಪ್ರಚೋದಿಸುವಂತಹ ಭಾಷಣ ಮಾಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಸಾಹಿತಿಗಳು ನಾನಾ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುವಂತ ಭಾಷೆ ಬಳಸಬಾರದು ಅಥವಾ ಆ ರೀತಿ ಭಾಷಣ ಮಾಡಬಾರದು. ಯಾರೇ ಪ್ರಚೋದನಾಕಾರಿ ಭಾಷಣ ಮಾಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಶನಿವಾರ ಗೊರೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕೇ ಹೊರತು ಜನಾಂಗ, ಸಮುದಾಯಗಳನ್ನು ಕೆರಳಿಸುವ ಕೆಲಸ ಮಾಡಬಾರದು. ಅದನ್ನು ಯಾವುದೇ ರೀತಿಯಲ್ಲೂ ಒಪ್ಪಲಿಕ್ಕೆ ಸರ್ಕಾರ ತಯಾರಿಲ್ಲ. ಮುಂದಿನ ದಿನಗಳಲ್ಲಿ ಮಡಿಕೇರಿ, ಮಂಗಳೂರಿನಲ್ಲಿ ಆದಂತಹ ಘಟನೆಗಳನ್ನು ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಟಿಪ್ಪು ಜಯಂತಿ ಆಚರಣೆ ನಿರ್ಧಾರ ಮರು ಪರಿಶೀಲಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ. ಸಮಾಜ ಸುಧಾರಕರ ಪುತ್ಥಳಿ, ಜಯಂತಿ ಆಚರಣೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬುದು ಸರಿಯಲ್ಲ. ಗಾಂಧಿಜೀ, ಬಸವಣ್ಣ, ಅಂಬೇಡ್ಕರ್ ಅವರಂತಹವರ ತತ್ವಾದರ್ಶಗಳನ್ನು ಯುವ ಜನಾಂಗಕ್ಕೆ ತಿಳಿಸುವುದು ಅಗತ್ಯವಾಗಿದೆ. ಆದ್ದರಿಂದ ಅಂಥವರ ಪುತ್ಥಳಿ ಸ್ಥಾಪನೆ ಮತ್ತು ಜಯಂತಿ ಆಚರಣೆಗಳು ಅವಶ್ಯ ಎಂದರು. ಈ ನೆಲದ ಕಾನೂನಿನ ರಕ್ಷಣೆಗೆ ರಾಜ್ಯ ಸರ್ಕಾರ ಸಮರ್ಥವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮ ರೀತಿಯಲ್ಲೇ ಇದೆ. ಕರಾವಳಿ ಪ್ರದೇಶದಲ್ಲಿ ನೈತಿಕ ಪೊಲೀಸ್ ಗಿರಿ ಎಂದು ಕರೆಯುವುದು ಸರಿಯಲ್ಲ. ಇನ್ನೊಬ್ಬರ ನಡವಳಿಕೆಯನ್ನು ನಿಯಂತ್ರಿಸುವುದು ನೈತಿಕ ಗುರಿಯಲ್ಲ. ಅದಕ್ಕೆ ರಾಜ್ಯದಲ್ಲಿ ಅವಕಾಶವೂ ಇಲ್ಲ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos