ಪ್ರೊ. ಅರವಿಂದ ಮಾಲಗತ್ತಿ- ಕುಂ. ವೀರ ಭದ್ರಪ್ಪ 
ಜಿಲ್ಲಾ ಸುದ್ದಿ

ಶುರುವಾಯ್ತು ಸಾಹಿತ್ಯ ಸೆಡವು

ಕಲಬುರ್ಗಿ ಅವರ ಹತ್ಯೆ ಬಗ್ಗೆ ರಾಜ್ಯದಲ್ಲೂ ಸಾಹಿತ್ಯ ವಲಯ ಸಿಡಿದೇಳಲು ಪ್ರಾರಂಭಿಸಿದೆ. ಈಗ ಹಿರಿಯ ಸಾಹಿತಿಗಳಿಬ್ಬರು ದಿಟ್ಟ ನಿರ್ಧಾರ...

ಬಳ್ಳಾರಿ/ ಮೈಸೂರು: ಕಲಬುರ್ಗಿ ಅವರ ಹತ್ಯೆ ಬಗ್ಗೆ ರಾಜ್ಯದಲ್ಲೂ ಸಾಹಿತ್ಯ ವಲಯ ಸಿಡಿದೇಳಲು ಪ್ರಾರಂಭಿಸಿದೆ. ಈಗ ಹಿರಿಯ ಸಾಹಿತಿಗಳಿಬ್ಬರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಕುಂ. ವೀರ ಭದ್ರಪ್ಪ, ಸಾಹಿತಿ, ಹಿರಿಯ ಪತ್ರಕರ್ತ ಜಿ. ಎನ್.ರಂಗನಾಥ ರಾವ್ ತಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದರೆ, ಪ್ರೊ. ಅರವಿಂದ ಮಾಲಗತ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಭಾನುವಾರದ ಕನ್ನಡಪ್ರಭದಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರ ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಅವರು ಸಾಹಿತಿಗಳ ನಿರ್ಲಿಪ್ತತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಒಂದು ವಿಡಂಬ ನಾತ್ಮಕ ಲೇಖನ ಕೂಡ ಪ್ರಕಟವಾಗಿತ್ತು. ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪ್ರಗತಿಪರ ಲೇಖಕರ ಮೇಲಾಗುತ್ತಿರುವ ದಾಳಿ, ದಬ್ಬಾಳಿಕೆ ವಿರೋಧಿಸಿ, ಈ ನಿಲುವು ತೆಗೆದುಕೊಂಡಿರುವುದಾಗಿ ಕುಂ. ವೀರಭದ್ರಪ್ಪ `ಕನ್ನಡಪ್ರಭ'ಕ್ಕೆ ತಿಳಿಸಿದರು.
ಅ. 15ರಂದು ಬೆಂಗಳೂರಿನಲ್ಲಿರುವ ಅಕಾಡೆಮಿಯ ಪ್ರಾದೇಶಿಕ ಕಚೇರಿಗೆ ತೆರಳಿ ಪ್ರಶಸ್ತಿ, ಸ್ಮರಣಿಕೆ ಹಾಗೂ ರು.  50 ಸಾವಿರ ನಗದು ಮರಳಿಸುವುದಾಗಿ ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ 2012ರಲ್ಲಿ ಕುಂವೀ ಅವರ `ಅರಮನೆ' ಕಾದಂಬರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕೇಂದ್ರದ ನಡೆಗೆ ವಿರೋಧ: ಸತ್ಯ ಪ್ರತಿಪಾದಕ ಕಲಬುರ್ಗಿ ಅವರನ್ನು ದುಷ್ಕರ್ಮಿಗಳು ಹಾಡುಹಗಲೇ ಗುಂಡಿಕ್ಕಿ ಕೊಂದರೂ ಸಾಹಿತ್ಯ ಅಕಾಡೆಮಿ ಮೌನ ಮುರಿದಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಚಕಾರವೆತ್ತಿಲ್ಲ. ಇದು ಅತ್ಯಂತ ಖೇದಕರ. ಇದರ ವಿರುದ್ಧ ಸಾಹಿತ್ಯ ವಲಯ ದನಿ ಎತ್ತಬೇಕಾದ ಅಗತ್ಯವಿದೆ ಎಂದರು. ಪ್ರಗತಿಪರ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹುನ್ನಾರಕ್ಕೆ ಪ್ರತಿರೋಧ ತೋರಬೇಕಾದ ಅಗತ್ಯವಿದೆ. ಎಲ್ಲ ಸಾಹಿತಿಗಳು ಒಗ್ಗೂಡಬೇಕಾದ ಸಂಕ್ರಮಣ ಕಾಲ ಇದಾಗಿದೆ. ಕರ್ನಾಟಕದಲ್ಲಷ್ಟೆ ಅಲ್ಲ, ಇಡೀ ದೇಶದಲ್ಲಿ ಕೋಮುವಾದಿಗಳು ವಿಜೃಂಭಿಸುತ್ತಿದ್ದಾರೆ. ದಾದ್ರಿ ಘಟನೆ ಸೇರಿದಂತೆ ದೇಶದ ನಾನಾ ಕಡೆ ವೈಚಾರಿಕ ಚಿಂತಕರ ಕೊಲೆ ಹಾಗೂ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಗುಂಡು, ಮುದ್ದುಗಳಿಂದ ಪ್ರಪಖರ  ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಜನಮುಖಿ ಚಿಂತನೆಗೆ ಧಕ್ಕೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಾಡಿನ ಸಾಹಿತ್ಯ ವಲಯ ಒಗ್ಗೂಡಿ ಚಳವಳಿಗೆ ಹಾದಿ ಹಿಡಿಯಬೇಕಾಗಿದೆ ಎಂದರು. 
ಮೌನ ತರವಲ್ಲ: ಕಲಬುರ್ಗಿ ಅವರ ಹತ್ಯೆ ಬಗ್ಗೆ ಲೇಖಕರ ಅತಿದೊಡ್ಡ ಸಂಸ್ಥೆಯಾದ ಸಾಹಿತ್ಯ ಅಕಾಡೆಮಿ ಮೌನವಾಗಿರುವುದು ತರವಲ್ಲ. ಕೂಡಲೇ ಅಕಾಡೆಮಿ ಮೌನ ಮುರಿದು ಖಂಡನಾತ್ಮಕ ಹೇಳಿಕೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿರುವ ಹಿರಿಯ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜಿನಾಮೆ
ಸಲ್ಲಿಸಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಡಾ. ವಿಶ್ವನಾಥ ಪ್ರಸಾದ ತಿವಾರಿ ಮತ್ತು ಕಾರ್ಯದರ್ಶಿ ಶ್ರೀನಿವಾಸ ರಾವ್‍ಗೆ ರಾಜಿನಾಮೆ ಪತ್ರ ರವಾನಿಸಿದ್ದಾರೆ. ಸಾಹಿತಿ ಮತ್ತು ಹಿರಿಯ ಪತ್ರಕರ್ತ ಜಿ.ಎನ್ ರಂಗನಾಥ್ ರಾವ್ ಅವರು 2014ರಲ್ಲಿ ಅನುವಾದಕ್ಕಾಗಿ  ಬಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು 50 ಸಾವಿರ ರುಪಾಯಿ ನಗದು ಸಹಿತ ಸೋಮವಾರ ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದಿರುವ ಹಲ್ಲೆಯಮ್ಮು ಪ್ರತಿಭಟಿಸಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ನಾಲ್ವರು ಲೇಖಕರಿಂದ ಪ್ರಶಸ್ತಿ ವಾಪಸ್
ಪ್ರಶಸ್ತಿ ವಾಪಸ್ ನೀಡುತ್ತಿರುವವರ ಸರಣಿ ಭಾನುವಾರವೂ ಮುಂದುವರಿದಿ ದೆ. ಪ್ರಶಸ್ತಿ ವಾಪಸ್ ನೀಡಿದವರನ್ನು ಬೆಂಬಲಿಸಿ ಪಂಜಾಬ್‍ನ ಮೂವರು ಖ್ಯಾತ ಲೇಖಕರಾದ ಗುರ್ಬಚನ್ಭು ಲ್ಲರ್, ಅಜ್ಮೇರ್ ಸಿಂಗ್ ಔಲಾಖ್ ಮತ್ತು ಅತಂಜಿತ್ ಸಿಂಗ್ ಅವರು ತಮ್ಮ ಅಕಾಡೆಮಿ ಪ್ರಶಸ್ತಿಗಳನ್ನೂ ಹಿಂದಿರುಗಿಸುವು ದಾಗಿ ಘೋಷಿಸಿದ್ದಾರೆ. ಜತೆಗೆ, ಗುಜರಾತ್‍ನ ಬುಡಕಟ್ಟು ಹೋರಾಟ ಗಾರ, ಭಾಷಾ ಶಾಸ್ತ್ರಗಣೇಶ್ ದೇವಿ, ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಅಮನ್ ಸೇಠಿ ಅವರೂ ಇದೇ ನಿರ್ಧಾರ ಕೈಗೊಂಡಿದ್ದಾರೆ. ದೇಶದಲ್ಲಿ ಸೃಷ್ಟಿಯಾಗುತ್ತಿರುವ ಕೋಮುದ್ವೇಷದ ವಾತಾವರಣದಿಂದ ತುಂಬಾ ಬೇಸರವಾ ಗಿದೆ. ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ರಾಷ್ಟ್ರದ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರವು ತನ್ನ ಕರ್ತವ್ಯವನ್ನುಮಾಡುತ್ತಿಲ್ಲ ಎಂದೂ ಈ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಕಲಬುರ್ಗಿ ಹತ್ಯೆಯಾದ ಕೂಡಲೇ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸಿದ್ದೆ. ಮಗನ ಮದುವೆಯ ಕೆಲಸದ ಒತ್ತಡದಲ್ಲಿ ಅದು ಸಾಧ್ಯವಾಗಲಿಲ್ಲ. ನನಗೆ ಅಕಾಡೆಮಿ ಪ್ರಶಸ್ತಿ ಸಿಗಲು ಕಲಬುರ್ಗಿ ಅವರೇ ಕಾರಣ. ಅಕಾಡೆಮಿ ಸದಸ್ಯರಾಗಿದ್ದ ಅವರು, `ಅರಮನೆ' ಕಾದಂಬರಿಯಲ್ಲಿನ ಸಾಹಿತ್ಯದಲ್ಲಿನ ಗಟ್ಟಿತನ ಮತ್ತಿತರ ಕಾರಣಕ್ಕೆ ಪ್ರಶಸ್ತಿ ದಕ್ಕಲೇ
ಬೇಕು ಎಂದು ಪ್ರತಿಪಾದಿಸಿದ್ದರು.
-ಕುಂ ವೀರಭದ್ರಪ್ಪ  , ಸಾಹಿತಿ
ಪಾನ್ಸರೆ, ಕಲಬುರ್ಗಿ ಮತ್ತು ದಾದ್ರಿ ಹತ್ಯೆ ಪ್ರಕರಣವನ್ನು ಗಮನಿಸಿದರೆ ಭಾರತೀಯ ವ್ಯವಸ್ಥೆಯಲ್ಲಿ ಒಂದು ರೀತಿಯ ಸಂವಿಧಾನಾತ್ಮಕ ಮಾನವ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಈ ನನ್ನ ರಾಜಿನಾಮೆ ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಗೆ ಚುರುಕುಗೊಳ್ಳಲು ಮತ್ತು ಆರೋಪಿಗಳನ್ನು ಬಂಧಿಸಲು ಪರೋಕ್ಷವಾಗಿ ಒತ್ತಡ ಹಾಕುತ್ತದೆಎಂದು ಭಾವಿಸಿದ್ದೇನೆ.
-ಪ್ರೊ .ಅರವಿಂದ ಮಾಲಗತ್ತಿ,  ಸಾಹಿತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT