ಬಾಗಲಕೋಟೆ: "ಸದಾ ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಅಕ್ಷರ ಮತ್ತು ಪೆನ್ನು ಇಂದು ಭ್ರಷ್ಟಾಚಾರದ ಪರವಾಲುತ್ತಿದೆ. ಇಂಥ ಕಟು ವಾಸ್ತವದಲ್ಲಿ ಶೋಷಿತರ ಪರ ಯಾರು ಮಾತನಾಡಬೇಕು. ಈ ಮೊದಲು ರಾಜರಾಣದಲ್ಲಿ ಮಾತ್ರ ಇದ್ದ ಜಾತಿ ಗುಂಪುಗಾರಿಕೆ ಇದೀಗ ಸಾಹಿತ್ಯ ಹಾಗೂ ಮಾಧ್ಯಮದಲ್ಲೂ ತನ್ನ ಬೇರು ಬಿಟ್ಟಿದೆ. ಅಕ್ಷರಗಳೇ ನಮ್ಮನ್ನು ಮುಟ್ಟಿಸಿಕೊಳ್ಳದಿದ್ದರೆ ಭವಿಷ್ಯದ ಪರಿಸ್ಥಿತಿ ಏನಾಗಬಹುದು?
ಹಿರಿಯ ಕವಿ, 6 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸತ್ಯಾನಂದ ಪಾತ್ರೋಟ ಇಂತಹ ಗಂಭೀರ ಪ್ರಶ್ನೆಯೊಂದನ್ನು ಸಮ್ಮೇಳನದ ಎದುರಿಟ್ಟರು. ಬಾಗಲಕೋಟೆಯ ಸನಾದಿ ಅಪ್ಪಣ್ಣ ವೇದಿಕೆಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಇಂದು ಎಲ್ಲೆಡೆ ಕೋಮುವಾದ ವಿಜೃಂಭಿಸುತ್ತಿದೆ. ಜಾತಿವಾದ ತಾಂಡವವಾಡುತ್ತಿದೆ. ಇದು ಅಪಾಯಕಾರಿ. ದಲಿತ ಸಾಹಿತಿಗಳು ಸರ್ಕಾರದ ಫಲಾನುಭವಿಗಳಾಗುವ ಬದಲು ಸಮುದಾಯದ ಅಖಂಡತೆ ಪ್ರಶ್ನೆ ಬಂದಾಗ ಎಚ್ಚರದಿಂದ ನಡೆದುಕೊಳ್ಳಬೇಕು ಎಂದರು.