ಜಿಲ್ಲಾ ಸುದ್ದಿ

ಈಗಿನ ಬರವಣಿಗೆಯಲ್ಲಿ ಮೌನಕ್ಕೆ ಜಾಗವಿಲ್ಲ

ಬೆಂಗಳೂರು: ಇತ್ತೀಚಿನ ಬರವಣಿಗೆಯಲ್ಲಿ ಮೌನಕ್ಕೆ ಜಾಗವಿಲ್ಲದಂತಾಗಿದ್ದು, ಮಾತನ್ನು ಬೆಸೆಯುವ ಗುಣ ಈ ಮೌನಕ್ಕಿರುತ್ತದೆ. ಮೌನವಿದ್ದಾಗ ಹೇಗೆ ಮಾತನಾಡಬೇಕೆಂಬುದು ತಿಳಿಯುತ್ತದೆ, ಮಾತು ಹಿಡಿತದಲ್ಲಿ ಸಿಗುತ್ತದೆ. ಆದರೆ ಮೌನವನ್ನು ಒಲಿಸಿಕೊಳ್ಳುವ ಪರಿ ತಿಳಿದಿರಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದ್ದಾರೆ.

ಸಿವಿಜಿ ಪಬ್ಲಿಕೇಷನ್ ನಗರದ ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ.ವಿ ಕೃಷ್ಣರಾವ್ ರಚಿತ `ಈ ಭೂಮಿ ಆ ಬಾನು' ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು. ಯಾವುದೇ ವಿಷಯ ಹೊರಹೊಮ್ಮಬೇಕಿದ್ದರೂ ಅದು ಗಾಯನ, ನಾಟಕ ಯಾವುದೇ ರೂಪವಾದರೂ ಅದರಲ್ಲಿರುವ ಭಾಷೆ ಮುಖ್ಯ ಎಂದರು. ಕವಿಗೆ ಪದ್ಯ ಹಾಗೂ ಗದ್ಯ ಬೇರೆ ಎನ್ನಿಸುವುದಿಲ್ಲ. ಯಾವುದಕ್ಕಾದರೂ ಅದರ ಲಯ ಹಿಡಿದುಕೊಂಡರೆ ಸಾಕು. ಆದರೆ ವಿನ್ಯಾಸದಿಂದ ಪಡೆಯುವ ಪರಿ ಬೇರೆ ಬೇರೆಯಾಗಿರುತ್ತದೆ. ಕೃಷ್ಣಮೂರ್ತಿಯವರು ಕೇವಲ ಸಾಹಿತಿಯಷ್ಟೇ ಅಲ್ಲ, ಸಂಗೀತಗಾರರ ಜತೆಗೆ ಚಿತ್ರಕಲೆಯನ್ನು ಮೈಗೂಡಿಸಿಕೊಂಡು ಎಲ್ಲ ಕ್ಷೇತ್ರದ ಬಗ್ಗೆಯೂ ವಿಶಿಷ್ಟ ಜ್ಞಾನ ಹೊಂದಿದವರು.

ಇವರು 5 ವರ್ಷಗಳಲ್ಲಿ ನಾಲ್ಕು ಪುಸ್ತಕವನ್ನು ಹೊರತಂದಿದ್ದಾರೆ. ಅದರಲ್ಲಿರುವ ಕವನಗಳು ಒಂದು ಮುಗಿಯುತ್ತಿದ್ದಂತೆ ಇನ್ನೊಂದು ಕವನಕ್ಕೆ ನಾಂದಿಯಾಗುತ್ತಿತ್ತು. ಆದರೆ ಅದರ ಮಧ್ಯದಲ್ಲಿರುವ ಮಾತನ್ನು ಬೆಸೆಯುವ ಮೌನ ವಿಶೇಷವಾಗಿದೆ ಎಂದು ಹೇಳಿದರು. ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಕೃಷ್ಣಮೂರ್ತಿಯವರು ತಮ್ಮ ಪತ್ನಿಯನ್ನು ಕಳೆದುಕೊಂಡ ವರ್ಷದಿಂದ ಕವನಗಳನ್ನು ರಚಿಸಲು ಪ್ರಾರಂಬಿsಸಿದರು. ಈಗ ಪ್ರಾರಂಭವಾದರೂ ಸುಮಾರು 30ವರ್ಷಗಳ ಹಿಂದಿನ ತಯಾರಿಯನ್ನು ಕವನಗಳಲ್ಲಿ
ಕಾಣಬಹುದು ಎಂದರು.

ಸಂಗಾತಿ ನೆನಪು ಮಾಡಿಕೊಂಡು ಸಂಗೀತದಲ್ಲಿ ಸಂಗಾತಿಯನ್ನು ಬೆರೆಸುತ್ತಾ, ಪ್ರತಿ ನಿತ್ಯ ತನ್ನ ಪತ್ನಿ ಹಾಡುತ್ತಿದ್ದ ಹಾಡುಗಳು, ಅವಳ ನಗುವನ್ನು ಮೆಲುಕು ಹಾಕುತ್ತಿದ್ದುದ್ದೇ ಅವರ ಕವನಕ್ಕೆ ಸ್ಫೂರ್ತಿಯಾಗಿದೆ. ಚೈತನ್ಯ, ದೇಹ ಪ್ರಾಣ, ಸಖ ಸಖಿ, ಪ್ರಕೃತಿ-ಪುರುಷ ಒಟ್ಟಾಗಿ ಸೇರಿಕೊಳ್ಳುವ ಹಾಗೆ ಈ ಭೂಮಿ, ಆ ಭಾನಿನಲ್ಲಿ ಕಂಡು ಬರುವ ಸ್ನೇಹ ಎಲ್ಲವೂ ಒಂದೇ ರೀತಿಯಾಗಿದೆ ಎಂದು ಹೇಳಿದರು.

SCROLL FOR NEXT