ಜಿಲ್ಲಾ ಸುದ್ದಿ

ಹಸಿರು ನ್ಯಾಯಾಧಿಕರಣದ ಆದೇಶಕ್ಕೆ ರಾಜೀವ್ ಚಂದ್ರಶೇಖರ್ ಸ್ವಾಗತ

ಬೆಂಗಳೂರು: ಬೆಳ್ಳಂದೂರು, ಅಗರ ಕೆರೆಗಳ ನಡುವಿನ ಪರಿಸರ ಸೂಕ್ಷ್ಮಪ್ರದೇಶ ಸಮೀಕ್ಷೆ ಸರಿಯಾಗಿ ನಡೆಸದ ತಜ್ಞರ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಕ್ರಮವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

ಈ ಆದೇಶ ಸೂಕ್ಷ್ಮ ಯೋಜನೆಗಳ ಪುನರ್‍ವಿಮರ್ಶೆಗೆ ನೆರವಾಗಲಿದ್ದು, ಭ್ರಷ್ಟ ಅಧಿಕಾರಿಗಳು, ಅಕ್ರಮ ಯೋಜನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನೆರವಾಗಲಿದೆ ಎಂದು ಆಶಿಸಿದ್ದಾರೆ. ಬೆಂಗಳೂರು ಕೇಂದ್ರಿತ ಯೋಜನೆಗಳು ಭ್ರಷ್ಟರ ಪಾಲಾಗದಂತೆ ತಡೆಯಲು ನಾಗರಿಕ ಹಿತರಕ್ಷಣಾ ಸಮಿತಿಗಳು, ನಾಗರಿಕ ತಂಡಗಳು ಮತ್ತು ರಾಜಕೀಯ ಪ್ರತಿನಿಧಿಗಳ ಸಹಭಾಗಿತ್ವದಡಿ ಕೆಲಸ ಮಾಡಬೇಕು.

ಹಸಿರು ನ್ಯಾಯಾಧಿಕರಣದ ಆದೇಶ ಸ್ವಾಗತಿಸಿರುವ ಸಂಸದ ರಾಜೀವ್ ಚಂದ್ರಶೇಖರ್, ಬೆಳ್ಳಂದೂರು ಕೆರೆಯಂಥ ಪರಿಸರಸೂಕ್ಷ್ಮ ಪ್ರದೇಶದಲ್ಲಿ ತಲೆ ಎತ್ತಲಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ಯೋಜನೆಗಳೆಲ್ಲವನ್ನೂ ಪುನರ್‍ಪರಿಶೀಲನೆಗೆ ಒಳಪಡಿಸಬೇಕಿದೆ ಎಂದಿದ್ದಾರೆ. ನಮ್ಮ ನಗರ ಉಳಿಯಬೇಕೆಂದರೆ, ನಮ್ಮ ಬೆಂಗಳೂರು ಪ್ರತಿಷ್ಠಾನದಂಥ ಸಂಘಟನೆಗಳು, ನಾಗರಿಕ ಹಿತರಕ್ಷಣಾ ಸಮಿತಿಗಳು, ನನ್ನಂಥ ರಾಜಕೀಯ ಪ್ರತಿನಿಧಿಗಳು ಮತ್ತು ನಾಗರಿಕರ ಸಂಘಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ಆಗ ಮಾತ್ರ ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ತಡೆಯುವುದು ಹಾಗೂ ಅವುಗಳಿಗೆ ಅನುಮತಿ ನೀಡಿರುವ ಭ್ರಷ್ಟ ಅಧಿಕಾರಿಗಳನ್ನು ಬಯಲಿಗೆಳೆಯುವುದು ಮತ್ತು ಅವರನ್ನು ಜವಾಬ್ದಾರರನ್ನಾಗಿಸುವುದು ಸುಲಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

SCROLL FOR NEXT