ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಯಮರೂಪಿ ಯಾಗಿರುವ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಮೃತರಾಗುವವರ ಸಂಖ್ಯೆ ಮುಂದುವರೆದಿದೆ. ಗುರುವಾರ ರಾತ್ರಿ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ರಸ್ತೆಗುಂಡಿ ಅಪಘಾತದಲ್ಲಿ ಬಲಿಯಾಗಿದ್ದು ಆಕೆಯ ಪತಿ ಗಾಯಗೊಂಡಿದ್ದಾರೆ. ಎಚ್ಎಎಲ್ ಸಮೀಪದ ದೇವರಬೀಸನಹಳ್ಳಿ ಮೇಲ್ಸೆತುವೆಯಲ್ಲಿ ದುರ್ಘಟನೆ ಸಂಭವಿಸಿದ್ದು ಮಧ್ಯಪ್ರದೇಶ ಮೂಲದ ಸ್ತುತಿ ಪಾಂಡೆ (25)ಮೃತರು. ಇವರ ಪತಿ ಓಂಪ್ರಕಾಶ ಅವರಿಗೆ ಗಾಯಗಳಾಗಿವೆ.
ಗಂಡಾಂತರ ತಂದ ಗುಂಡಿ: ಗುರುವಾರ (ಸೆ.17) ಸಂಜೆ 5 ಗಂಟೆಗೆ ಗಣೇಶ ಚತುರ್ಥಿ ಆಚರಿಸಲು ಮುನೇಕೊಳಲುವಿನಲ್ಲಿರುವ ಸ್ನೇಹಿತ ಸೌರಭ್ ಮನೆಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ರಾತ್ರಿ ಊಟ ಮಾಡಿ 9 ಗಂಟೆಗೆ ಹೊಂಡಾ ಆ್ಯಕ್ಟಿವಾ ವಾಹನದಲ್ಲಿ ತಮ್ಮಮನೆಗೆ ಮರಳುತ್ತಿದ್ದರು. 9.30ರ ಸುಮಾರಿಗೆ ದೇವರಬೀಸನಹಳ್ಳಿ ಸಕ್ರ ಆಸ್ಪತ್ರೆ ಮೇಲ್ಸೆತುವೆ ಯಲ್ಲಿ ತೆರಳುತ್ತಿದ್ದಾಗ ದಿಢೀರ್ ರಸ್ತೆಗುಂಡಿ ಕಾಣಿಸಿಕೊಂಡಿದೆ. ಅದನ್ನು ತಪ್ಪಿಸಲು ಯತ್ನಿಸಿ ಓಂಪ್ರಕಾಶ್ ಬ್ರೇಕ್ ಹಾಕಿದ್ದಾರೆ. ಅಷ್ಟೊತ್ತಿಗೆ ಗುಂಡಿ ಇಳಿದಿದ್ದ ಬೈಕ್ ಮೇಲಕ್ಕೇರುವಾಗ ಹಿಂಬದಿ ಕುಳಿತಿದ್ದ ಸ್ತುತಿ ರಸ್ತೆಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿದ್ದ ಕಾರಣ ಅವರನ್ನು ಕೂಡಲೇ ಸಕ್ರ ಆಸ್ಪತ್ರೆಗೆ ಕರೆದೊ ಯ್ಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಸ್ತುತಿ ಮೃತಪಟ್ಟಿದ್ದರು ಎಂದು ವೈದ್ಯಕೀಯ ವರದಿ ಹೇಳಿದೆ.
ಟೆಕ್ಕಿ ಸಾವಿಗೆ ಕಾರಣವಾದ ದೇವರಬೀಸನಹಳ್ಳಿ ಮೇಲ್ಸೆತುವೆ ಗುಂಡಿ ಆದರ್ಶ ದಂಪತಿದಂಪತಿ ಬನಶಂಕರಿ 1ನೇ ಹಂತದಲ್ಲಿ ವಾಸವಿದ್ದರು. ಸ್ತುತಿ ಲ್ಯಾಂಡ್ ಮಾರ್ಕ್ ಸಾಫ್ಟ್ವೇರ್ ಕಂಪನಿಯಲ್ಲಿ ಸಿನಿಯರ್ ಟೆಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಓಂಪ್ರಕಾಶ್ ಕೂಡಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಐದು ವರ್ಷದಿಂದ ನಗರದಲ್ಲಿ ನೆಲೆಸಿರುವ ಇವರ ವಿವಾಹ ಎರಡೂವರೆ ವರ್ಷಗಳ ಹಿಂದೆ ಆಗಿತ್ತು. ಆದರೆ, ಹಬ್ಬದ ದಿನವೇ ಈ ರೀತಿ ದುರಂತ ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ಸಂಬಂಧಿಎಂ.ಪಿ. ಶರ್ಮಾ ಹೇಳಿದರು. ರಾತ್ರಿ 9 ಗಂಟೆಗೆ ಸ್ತುತಿ ಹಾಗೂ ಓಂಪ್ರಕಾಶ್ ತೆರಳಿದರು. ಆದರೆ, ಇನ್ನು ಕೆಲ ಸ್ನೇಹಿತರು ಇದ್ದ ಕಾರಣ ಅವರೊಂದಿಗೆ ಮಾತನಾಡುತ್ತಾ ಕುಳಿತಿದ್ದೆ. ಅರ್ಧ ತಾಸಿನಲ್ಲೇ ಅಪಘಾತದ ಮಾಹಿತಿ ಬಂದಿದ್ದು ನಂಬಲಾಗಲಿಲ್ಲ. ಗಣೇಶ ಹಬ್ಬ ಆಚರಿಸಿದ ಸಂಭ್ರಮ ಕೆಲವೇ ಕ್ಷಣಗಳಲ್ಲಿ ಹೊರಟು ಹೋಯಿತು ಎಂದು ಸ್ನೇಹಿತ ಸೌರಭ್ ದುಃಖಿತರಾಗಿ ಹೇಳಿದರು.
ಬಿದ್ದಾಗ ಮೈ ಮೇಲೆ ಹರಿದ ವಾಹನ?
ಸ್ತುತಿ ಬೈಕ್ನಿಂದ ಕೆಳಗೆ ಬಿದ್ದಾಗ ಹಿಂದೆಯೇ ಬರುತ್ತಿದ್ದ ಮತ್ತೊಂದು ವಾಹನ ಆಕೆಯ ಮೈ ಮೇಲೆ ಹರಿದಿದೆ ಎಂದು ಓಂಪ್ರಕಾಶ್ ಸ್ನೇಹಿತ ಆಶಿಶ್ ಹೇಳಿದರು. ಅವರ ಹಿಂದೆಯೇ ಚಲಿಸುತ್ತಿದ್ದ ವಾಹನವೊಂದು ಹೊಟ್ಟೆಯ ಮೇಲೆ ಹರಿದಿದೆ. ಅದಕ್ಕೆ ಸಾಕ್ಷಿ ಎಂಬಂತೆ, ಸ್ತುತಿ ಹೊಟ್ಟೆಯ ಮೇಲೆ ವಾಹನ ಹರಿದಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ಸ್ತುತಿ ಪೊಲೀಸರೆದುರೇ ಅಪಘಾತ
ದೇವರಬೀಸನಹಳ್ಳಿ ಮೇಲ್ಸೆತುವೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಹಳೇ ಏರ್ ಪೋರ್ಟ್ ಸಂಚಾರ ಪೊಲೀಸರು ಶುಕ್ರವಾರ ಬೆಳಗ್ಗೆ ಪರಿಶೀಲಿಸುವಾಗ ಮತ್ತೊಂದು ದ್ವಿಚಕ್ರ ವಾಹನ ಗುಂಡಿಗೆ ಇಳಿದು ನಿಯಂತ್ರಣ ತಪ್ಪಿ ಮಹಿಳೆ ಬಿದ್ದರು. ಪೊಲೀಸರ ಎದುರೇ ದುರಂತ ಸಂಭವಿ ಸಿದ ಬಳಿಕವಷ್ಟೇ ಅಲ್ಲಿಗೆ ಬ್ಯಾರಿಕೇಡ್ ತಂದು ಹಾಕಿದ್ದಾರೆ. ಆದರೆ, ಟಾರು ಹಾಕಿ ಗುಂಡಿ ಮುಚ್ಚುವ ಪ್ರಯತ್ನವನ್ನು ಯಾರೂ ಮಾಡಿಲ್ಲ ಎಂದು ಎಂದು ಓಂಪ್ರಕಾಶ್ ಸ್ನೇಹಿತ ಆಶೀಶ್ ಆಕ್ರೋಶ ವ್ಯಕ್ತಪಡಿಸಿದರು.