ಜಿಲ್ಲಾ ಸುದ್ದಿ

ರಾಹುಲ್‍ ಗಾಂಧಿಗಾಗಿ ಕೆಪಿಸಿಸಿಯಿಂದ ಮೂರು ಕಾರ್ಯಕ್ರಮ

Shilpa D

ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯವ್ಯಾಪಿ ಪ್ರವಾಸಕ್ಕಾಗಿ ಕೆಪಿಸಿಸಿ  ಘಟಕದಿಂದ 3 ವಿಧದ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸಲಾಗಿದ್ದು, ಒಪ್ಪಿಗೆಗಾಗಿ ಕರಡನ್ನು ಹೈ ಕಮಾಂಡ್ ಬಳಿ ಕಳುಹಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನೋತ್ಸವ ಆಚರಣೆ ಮತ್ತು ರಾಹುಲ್ ಗಾಂಧಿ ಆಗಮನದ ಬಗ್ಗೆ ಕಾರ್ಯಕ್ರಮ ರೂಪಿಸಲು ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ.

ಹೈಕಮಾಂಡ್ ಕಳುಹಿಸಿರುವ ಮಾಹಿತಿ ಪ್ರಕಾರ ರಾಹುಲ್ ಗಾಂಧಿ ಅವರು ಅಕ್ಟೋಬರ್ 5 ರಂದು ಬೆಂಗಳೂರಿಗೆ ಆಗಮಿಸಲಿದ್ದು, ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.6ರಂದು ಹಾವೇರಿಗೆ ಭೇಟಿ ನೀಡಿ ರೈತ ಕುಟುಂಬದ ಜತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಮಂಡ್ಯಕ್ಕೆ ಭೇಟಿ ನೀಡಬಹುದು. ಅಕ್ಟೋಬರ್ 7ರಂದು ಕಾಂಗ್ರೆಸ್ ಬೆಂಬಲಿತ
ಗ್ರಾಮ ಪಂಚಾಯತಿ ಸದಸ್ಯರ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿ ದೆ. ಇದಕ್ಕೆ ರಾಹುಲ್ ಒಪ್ಪದೇ ಇದ್ದರೆ, ಹಾವೇರಿ ಮತ್ತು ಮಂಡ್ಯದಲ್ಲಿ ಪಾದಯಾತ್ರೆ ಮತ್ತು ಬಹಿರಂಗ ಸಭೆಯ ಪ್ರಸ್ತಾಪವೂ ಇದೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಸರ್ವಸದಸ್ಯ ಸಭೆ ಕರೆಯ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಸಂಪೂರ್ಣ ಸಮ್ಮತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಮೂರ್ನಾಲ್ಕು ವಿಚಾರಗಳನ್ನು ಒಳಗೊಂಡ ಕಾರ್ಯಕ್ರಮ ಪಟ್ಟಿಯನ್ನು ಹೈಕಮಾಂಡ್‍ಗೆ ಕಳುಹಿಸಿಕೊಡಲಾಗಿದೆ.

SCROLL FOR NEXT