ಜಿಲ್ಲಾ ಸುದ್ದಿ

ಮೌಢ್ಯ ಪ್ರತಿಬಂಧಕ ಕಾಯ್ದೆ ತನ್ನಿ

Shilpa D

ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರು ಮೌಢ್ಯದ ವಿರುದ್ಧ ಸತ್ಯ ಹೇಳಿದ್ದಕ್ಕೆ ಅವರ ಹತ್ಯೆಯಾಗಿದೆ.  ಇಂಥ ವಿಕೃತಿಗಳನ್ನ  ಹತ್ತಿಕ್ಕಲು ಮೌಢ್ಯ ಪ್ರತಿ ಬಂಧ ಕಾಯ್ದೆ ಜಾರಿಯಾಗಬೇಕು.  ಮಾಧ್ಯಮವೂ ಸಾಮಾಜಿಕ ಜವಾಬ್ದಾರಿ ತೋರಬೇಕು' ಎಂದು ಸಾಹಿತಿಗಳು ಮತ್ತು ಪತ್ರಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಡಾ.ಎಂ.ಎಂ. ಕಲಬುರ್ಗಿ ಒಂದು ನೆನಪು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ' ಎಂಬ ವಿಚಾರ ಸಂಕಿರಣದಲ್ಲಿ ಎಲ್ಲರೂ ಈ ವಿಚಾರವನ್ನು ಪ್ರತಿಪಾದಿಸಿದ್ದಾರೆ. `ಸತ್ಯ ಹೇಳಿದರೆ ಸಹಿಸಿಕೊಳ್ಳಲಾಗದವರಿಗೆ ಸಿಟ್ಟು ಬರುತ್ತದೆ. ಪಚನ ಕ್ರಿಯೆ ಆಗದೆ ಮನೋವಿಕಾರಿಗಳಾಗಿ ಇಂತಹ ಕುಕೃತ್ಯ ಎಸಗುತ್ತಾರೆ,'' ಎಂದು ಮುಖ್ಯ ಅತಿಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.


ಸಾಹಿತಿ ಚಂದ್ರ ಶೇಖರ ಪಾಟೀಲ ಮಾತನಾಡಿ `ಅಕ್ಷರ (ಮುದ್ರಣ) ಮಾಧ್ಯಮಕ್ಕೆ ಸಮಯ ಇರುತ್ತದೆ. ದೃಶ್ಯ ಮಾಧ್ಯಮಕ್ಕೆ ಸಮಯವೇ ಬೇಡ. ಫೇಸ್ ಬುಕ್ಕಂತೂ ಭೂಗತ ಪ್ರಚಂಚ! ಇಂಥ ವಾಸ್ತವದ ನಡುವೆ ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗೆ ಉಳಿಯುತ್ತದೆ. ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು, ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು ಮಾತನಾಡಿ, ``ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರವೃತ್ತಿಗೆ ಪತ್ರಕರ್ತರು ಬಲಿಯಾಗುತ್ತಿದ್ದರು. ಈಗ ಸಾಹಿತಿಗಳು ಸೇರಿದ್ದಾರೆ, ಕರ್ನಾಟಕದಲ್ಲಿ ಸಾಹಿತ್ಯ ವಲಯಕ್ಕೆ ಬೆದರಿಕೆ ಬರುತ್ತಿದೆ. ಕಣವಿ, ಗಿರಡ್ಡಿ ಗೋವಿಂದರಾಜು ಅವರ ಮನೆ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದವರ ಮೇಲೆ ಪೋಲೀಸರು ಜಾಮೀನು ನೀಡಬಹುದಾದ ಕೇಸು ಹಾಕಿದ್ದಾರೆ. ಪೊಲೀಸರೇ ಈ ರೀತಿ ಮಾಡಿದರೆ ಹೇಗೆ,''? ಎಂದು ಪ್ರಶ್ನಿಸಿದರು. ಹಂಪಿ ವಿವಿ ಕುಲಪತಿ ಡಾ. ಮಲ್ಲಿಕಾಘಂಟಿ, ಸಾಹಿತಿ ಡಾ.ಎಸ್.ಜಿ. ಸಿದ್ದರಾಮಯ್ಯ, ಪತ್ರಕರ್ತ ಎನ್.ಎಸ್. ಶಂಕರ್, ಖಾದ್ರಿ ಎಸ್. ಅಚ್ಯುತನ್ , ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಇದ್ದರು.

SCROLL FOR NEXT