ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆ ಮರು ಎಣಿಕೆ, ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಕ್ಯಾನ್ ಪ್ರತಿ ಪಡೆದು ಅರ್ಜಿ ಸಲ್ಲಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲಿ ಎಂದು ಮತ್ತು ಮರು ಎಣಿಕೆಗೆ ಅನವಶ್ಯಕ ಅರ್ಜಿಗಳು ಬರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿಯಮವನ್ನು ಇಲಾಖೆ ಜಾರಿಗೆ ತಂದಿದೆ.
ವಾರ್ಷಿಕ ಹಾಗೂ ಪೂರಕ ಪರೀಕ್ಷೆಯ ಫಲಿತಾಂಶ ಘೋಷಣೆ ನಂತರ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಯಥಾಪ್ರತಿ ಪಡೆಯಲು, ಪಡೆದ ಅಂಕಗಳ ಮರು ಎಣಿಕೆಗೆ ಮತ್ತು ಮರು ಮೌಲ್ಯ ಮಾಪನಕ್ಕೆ ಅವಕಾಶವಿದೆ. ಈ ಸೌಲಭ್ಯವನ್ನು ಮತ್ತಷ್ಟು ಸುಲಭಗೊಳಿಸಲು ಪಿಯು ಶಿಕ್ಷಣ ಇಲಾಖೆ ಮುಂದಾಗಿದೆ. ಹೊಸ ನಿಯಮ 2015-16ನೇ ಸಾಲಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ. ಸ್ಕ್ಯಾನ್ ಪ್ರತಿ ಪಡೆಯುವ ಬಗ್ಗೆ ಸಂಪೂರ್ಣ ವಿವರಗಳನ್ನು ಇಲಾಖೆಯ ವೆಬ್ ಸೈಟ್ www.pue.kar.nic.in ನಲ್ಲಿ ನೋಡಬಹುದು.