ರಾಯಚೂರು: ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ ದಂಪತಿಗಳು ಸಜೀವ ದಹನವಾದ ಘಟನೆ ಮಂಗಳವಾರ ಬೆಳಗಿನ ಜಾವ ರಾಯಚೂರಿನ ವಿದ್ಯಾನಗರದಲ್ಲಿ ನಡೆದಿದೆ.
ವಕೀಲ ನಾಗಬಸಪ್ಪ ಅಲಿಯಾಸ್ ನಾಗಭೂಷಣ (50) ಹಾಗೂ ಅವರ ಪತ್ನಿ ಇಂದಿರಾ(45) ಅವರು ದುರಂತದಲ್ಲಿ ಮೃತಪಟ್ಟ ದುರ್ದೃವಿಗಳು. ಅದೃಷ್ಟವಶಾತ್ ಮನೆಯಲ್ಲಿದ್ದ ಪುತ್ರ ವಿನಯ್ ಸುರಕ್ಷಿತವಾಗಿ ಪಾರಾಗಿದ್ದಾರೆ.
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಎಚ್ಚರಗೊಂಡ ದಂಪತಿಗಳು, ಅಡುಗೆ ಮನೆಯ ಲೈಟ್ ಹಾಕುತ್ತಿದ್ದಂತೆ ಬೆಂಕಿ ಆವರಿಸಿ, ಇಡಿ ಮನೆಗೇ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ದಂಪತಿಗಳಿಬ್ಬರು ಸಾವನ್ನಪ್ಪಿರಬೇಕೆಂದು ಹೇಳಲಾಗುತ್ತಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಈ ಸಂಬಂಧ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.