ಜಿಲ್ಲಾ ಸುದ್ದಿ

ಹೊಸ ವರ್ಷ ಆಚರಣೆ ವೇಳೆ ಕ್ಷುಲ್ಲಕ ಜಗಳಕ್ಕೆ ಯುವಕ ಕೊಲೆ

Mainashree
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಮದ್ಯದ ಅಮಲಿನಲ್ಲಿದ್ದ ಸ್ನೇಹಿತರಿಂದಲೇ ಇರಿತಕ್ಕೆ ಒಳಗಾಗಿ ಮೃತಪಟ್ಟಿರುವ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. 
ಸಕಲೇಶಪುರ ಮೂಲದ ಸಂತೋಷ್(27) ಸ್ನೇಹಿತರಿಂದ ಹತರಾದವರು. ಇವರು ಸುಬ್ರಮಣ್ಯಪುರದಲ್ಲಿ ಕೇಬಲ್ ಟಿವಿ ಆಪರೇಟರ್ ಆಗಿದ್ದರು. ಘಟನೆ ಸಂಬಂಧ ಆರೋಪಿಗಳಾದ ಮನೋಜ್, ದೀಪಕ್ ಮತ್ತು ಪವನ್‍ನ ಪೊಲೀಸರು ಬಂಧಿಸಿದ್ದಾರೆ. 
ಸುಬ್ರಮಣ್ಯಪುರದ ಶ್ರೇಯಸ್ ಬಡಾವಣೆಯ ಮನೆಯೊಂದರಲ್ಲಿ ಹೊಸ ವರ್ಷದ ಸಂಭ್ರಮಾಚರಿಸಲು ನಾಲ್ವರು ಸ್ನೇಹಿತರು ಸೇರಿದ್ದರು. ಈ ವೇಳೆ ನಾಲ್ವರು ಮದ್ಯ ಸೇವಿಸಿ ಸಂಭ್ರಮಾಚರಿಸುವಾಗ ನಡುರಾತ್ರಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ಏರ್ಪಡಿದೆ. 
ಜಗಳ ವಿಕೋಪಕ್ಕೆ ತಿರುಗಿ ಪರಿಸ್ಥಿತಿ ಕೈಮೀರಿದಾಗ ಮೂವರು ಸ್ನೇಹಿತರು ಚಾಕುವಿನಿಂದ ಸಂತೋಷನ ಹೊಟ್ಟೆಗೆ ಇರಿದಿದ್ದರು. ಇರಿತದಿಂದ ತೀವ್ರವಾಗಿ ಗಾಯಗೊಂಡ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
SCROLL FOR NEXT