ಜಿಲ್ಲಾ ಸುದ್ದಿ

ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಿ: ವೀರೇಂದ್ರ ಹೆಗ್ಗಡೆ

Manjula VN

ಬೆಂಗಳೂರು: `ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆ ಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನಿರ್ಮಾಣ್ ಸಮೂಹ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದೇಶಗಳಲ್ಲಿ ವೃದ್ಧರೆಂದರೆ ಅಪರಾ ಗೌರವವಿದೆ, ಅವರನ್ನು ಅಷ್ಟೇ ಗೌರವಯುತವಾಗಿ ನೋಡಿಕೊಳ್ಳಲಾಗುತ್ತದೆ, ಸಮಾಜಕ್ಕೆ ಅವರು ಭಾರ ಎಂದು ಅಲ್ಲಿನ ವ್ಯವಸ್ಥೆ ಪರಿಗಣಿಸಿಯೇ ಇಲ್ಲ. ಅಂತಹುದೇ ವ್ಯವಸ್ಥೆ ಭಾರತದಲ್ಲಿ ಅಲ್ಲಲ್ಲಿ ಕಾಣಬರುತ್ತಿದೆಯಾದರಹೂ ಅದಕ್ಕೊಂದು ಸ್ಪಷ್ಟ ಮೂಲರೂಪ ಸಿಗಬೇಕಿದೆ ಎಂದರು.

ನಿಸರ್ಗ ಬಡಾವಣೆಯಲ್ಲಿ ನಿರ್ಮಾಣ್ ಶೆಲ್ಟರ್ಸ್ ನಿರ್ಮಿಸಿ ನಿರ್ವಹಣೆ ಮಾಡುತ್ತಿರುವ ಹಿರಿಯರ ಮನೆ ಪ್ರಬುದ್ಧಾಲಯದ ವ್ಯವಸ್ಥೆಗಳನ್ನು ಪ್ರಶಂಸಿಸಿದ ಅವರು, ಇಡೀ ದೇಶದ ಹಿರಿಯರ ಮನೆಗಳ ಪೈಕಿ ಇದೂ ಅಪರೂಪಗಳ ಸಾಲಿಗೆ ಸೇರಿದೆ. ವಿವಿಧ ಕಾರಣಗಳಿಗಾಗಿ ಕುಟುಂಬದಿಂದ ದೂರಾಗಿ ನೆಮ್ಮದಿಯ ಬದುಕು ಬಯಸುವ ವೃದ್ಧರಿಗೆ ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆ ಒಂದು ಸುಸಜ್ಜಿತ ವಸತಿಕಲ್ಪಿಸುವ ಮೂಲಕ ಅವರು ಶಾಂತಿಯುತಜೀವನ ಸಾಗಿಸಲು ಅವಕಾಶ ಕಲ್ಪಿಸಿದೆ. ಲಕ್ಷ್ಮೀನಾರಾಯಣ್‍ಅವರ ಸೇವಾ ಧರ್ಮ ಮತ್ತು ಸಮಾಜದಲ್ಲಿನ ಹಿರಿಯರ ಬಗ್ಗೆ ಅವರಿಗಿರುವ ಕಾಳಜಿ ಅವರ ವ್ಯಕ್ತಿತ್ವವನ್ನು ಈ ಪ್ರಬುದ್ಧಾಲಯ ಪ್ರತಿಬಿಂಬಿಸಿದೆ ಎಂದು ಹೆಗ್ಗಡೆ ಪ್ರಶಂಸನೀಯ ಎಂದು ಹೇಳಿದರು.

ನಾವು ಅಸಹಾಯಕರು, ಯಾರಿಗೂ ಬೇಡದವರು ಎಂಬ ಮನೋಭಾವ ಹಿರಿಯಲ್ಲಿ ಹೋಗಬೇಕು. ವೃದ್ಧರು ದೇಶದ ಸಂಪತ್ತು, ಅವರ ಅನುಭವ ಇಂದಿನ, ಮುಂದಿನ ತಲೆಮಾರುಗಳಿಗೆ ದಾರಿ ದೀಪ, ಪುನರ್ಜನ್ಮದ ಕುರಿತ ನಂಬಿಕೆಗಳು ಏನೇ ಇದ್ದರೂ ಮುಂದಿನ ಜನ್ಮದಲ್ಲಿ ಒಳ್ಳೆಯ ಬದುಕು ಸಿಗಲಿ ಎಂದು ಆಶಿಸುವುದು ತಪ್ಪಲ್ಲ ಎಂದರು.

ವೇದಿಕೆಯಲ್ಲಿ ಸಮಾಜ ಸೇವಕ ಪ್ರಭಾಕರ ಭಂಡಾರಿ, ನಿಸರ್ಗ ಬಡಾವಣೆಯ ರಂಗನಾಥ್ , ನಿರ್ಮಾಣ್ ಆಸ್ತಿಗಳ ನಿರ್ವಹಣಾ ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರವಿರಾಜ್ ಭಟ್ ಉಪಸ್ಥಿತರಿದ್ದರು.

SCROLL FOR NEXT