ಜಿಲ್ಲಾ ಸುದ್ದಿ

ಕೆಪಿಎಸ್ ಮೇಲ್ಮನವಿ ಅರ್ಜಿ ವಜಾ, ನಿಯಮ ಪೂರ್ವಾನ್ವಯಗೊಳಿಸದಂತೆ ಸೂಚನೆ

Srinivas Rao BV

ಬೆಂಗಳೂರು: ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ 2012 ರಲ್ಲಿ ಕೇಂದ್ರ ಸರ್ಕಾರ ಲೋಕಸೇವಾ ಆಯೋಗದ ನಿಯಮಕ್ಕೆ ತಂದಿರುವ ತಿದ್ದುಪಡಿಯು ಪೂರ್ವಾನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕೆಎಎಸ್ ನಿಂದ ಬಡ್ತಿ ಪಡೆದಿದ್ದ ಮೂವರು ಐಎಎಸ್ ಅಧಿಕಾರಿಗಳಾದ ಎಫ್.ಆರ್ ಜಮಾ ದಾರ್, ವಿ ಶಂಕರ್, ವಿ ಶ್ರೀರಾಮ ರೆಡ್ಡಿ ಅವರ ಜೇಷ್ಠತೆ ನಿರ್ಣಯಕ್ಕೆ ಸಂಬಂಧಿಸಿದಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್, ಕೇಂದ್ರ ಲೋಕಸೇವಾ ಆಯೋಗದ ಮೇಲ್ಮನವಿ ಅರ್ಜಿ ವಜಾಗೊಳಿಸಿದೆ.

ತಿದ್ದುಪಡಿ ನಂತರದ ನೇಮಕಗಳಿಗೆ ಹೊಸ ನಿಯಮ ಜಾರಿ ಮಾಡಬೇಕು. ಆದರೆ ಹಿಂದಿನ ನೇಮಕಗಳಿಗೆ ಪೂರ್ವಾನ್ವಯಿಸಿ ಜೇಷ್ಠತೆ ಪಟ್ಟಿ ತಯಾರಿಸಬಾರದು ಎಂದು ಹೈಕೋರ್ಟ್ ನ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಕಳೆದ 2008 ಹಾಗೂ 2009 ರ ಖಾಲಿ ಹುದ್ದೆಗಳಿಗೆ ಸಂಬಂಧಿಸಿ 2012 ರಲ್ಲಿ ಮೂವರು ಅಧಿಕಾರಿಗಳನ್ನು ಕೆಎಎಸ್ ನಿಂದ ಐಎಎಸ್ ಗೆ ಬಡ್ತಿ ನೀಡಲಾಗಿತ್ತು.

ಹಾಗೆಯೇ ಅವರಿಗೆ ಜೇಷ್ಠತಾ ಪಟ್ಟಿ ಪ್ರಕಟಿಸುವಾಗ ಒಂದು ವರ್ಷ ವಿಳಂಬ ಮಾಡಲಾಗಿತ್ತು. 1987 ರ ನಿಯಮದ ಪ್ರಕಾರ ಜಮಾದಾರ್ ಅವರಿಗೆ 2000 ಹಾಗೂ ಶಂಕರ ಮತ್ತು ರೆಡ್ಡಿ ಅವರಿಗೆ 2001 ರಿಂದ ಜೇಷ್ಠತಾ ಪಟ್ಟಿ ಅನ್ವಯವಾಗುತ್ತಿತ್ತು. 2012 ರ ತಿದ್ದುಪಡಿ ನಿಯಮದ ಪ್ರಕಾರ ಇದು ಒಂದು ವರ್ಷ ವಿಳಂಬವಾಗುತ್ತಿತ್ತು.  ಆದರೆ ಪೂರ್ವಾನ್ವಯ ಮಾಡಿ ಕೇಂದ್ರ ಲೋಕಸೇವಾ ಆಯೋಗವು 1 ವರ್ಷ ವಿಳಂಬದ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಈ ಮೂವರು ಅಧಿಕಾರಿಗಳು ಸಿಎಟಿ ಮೊರೆ ಹೋಗಿದ್ದರು. ಅಧಿಕಾರಿಗಳ ಅರ್ಜಿ ಮಾನ್ಯ ಮಾಡಿದ್ದ ಸಿಎಟಿ, ತಿದ್ದುಪಡಿಯೂ ಪೂರ್ವಾನ್ವಯವಾಗಲಾರದು ಎಂದು ಹೇಳಿತ್ತು. ಸಿಎಟಿ ಆದೇಶವನ್ನು ಪ್ರಶ್ನಿಸಿ ಕೇಂದ್ರ ಲೋಕಸೇವಾ ಆಯೋಗವು ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

SCROLL FOR NEXT