ಜಿಲ್ಲಾ ಸುದ್ದಿ

ಪ್ಯಾಲೆಸ್ತೀನ್ ಶಾಂತಿಗೆ ಸಹಕಾರ ನೀಡಿ

Manjula VN

ಬೆಂಗಳೂರು: ಪ್ಯಾಲೆಸ್ತೀನ್ ನಾಗರಿಕರ ಬಗ್ಗೆ ಬೇರೆ ದೇಶಗಳಲ್ಲಿರುವ ಅಪಾರ್ಥ ಭಾವನೆ ತೊಲಗಬೇಕು. ಜತೆಗೆ ಪ್ಯಾಲೆಸ್ತೀನ್ ನಲ್ಲಿ ಶಾಂತಿ ನೆಲೆಸಲು ಬೇರೆ ದೇಶಗಳ ಸಹಕಾರವೂಬೇಕು. ಹೀಗಾಗಿ ಸಂಗೀತ, ನೃತ್ಯ, ನಾಟಕದ ಮೂಲಕ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಭಾರತದಲ್ಲಿ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದು ಪ್ಯಾಲೆಸ್ತೀನ್‍ನ ದಿ ಫ್ರೀಡಂ ಥಿಯೇಟರ್ ಕಲಾವಿದ ಫೈಸಲ್ ಅಬು ಅಲ್ಯಾಜಾ ಹೇಳಿದರು.

ಪ್ಯಾಲೆಸ್ತೀನ್ ಫ್ರೀಡಂ ಥಿಯೇಟರ್ ಹಾಗೂ ಸಮುದಾಯ ಕರ್ನಾಟಕವು ನಗರದ ಬಾದಾಮಿಹೌಸ್ ನಲ್ಲಿ ಶನಿವಾರ ಏರ್ಪಡಿಸಿದ್ದ `ಪ್ಯಾಲೆಸ್ತೀನ್ ಸುತ್ತಮುತ್ತ ಮಾತುಕತೆ' ಸಂವಾದದಲ್ಲಿ ಅವರು ಮಾತನಾಡಿದರು. ಪ್ಯಾಲೆಸ್ತೀನ್‍ನಲ್ಲಿ ಶಾಂತಿ ನೆಲೆಸಲು ಕಲೆ, ಸಂಗೀತಗಳೇ ಆಯುಧಗಳಾಗಿವೆ. ಭಾರತದ ಜತೆ ಸಾಂಸ್ಕೃತಿಕ ಕೊಂಡಿ ಬೆಸೆಯಲು ಸಹ ಕಲೆ ಮೂಲಕವೇ ಪ್ರಯತ್ನಿಸಲಾಗುತ್ತಿದೆ. ಪ್ಯಾಲೆಸ್ತೀನ್‍ನಲ್ಲಿ ಧರ್ಮದ ಹೆಸರಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಇದಕ್ಕೆ ಪರಿಹಾರ ಸಿಗಬೇಕಾದರೆ ಮೊದಲು ಸತ್ಯವನ್ನು ತಿಳಿದುಕೊಳ್ಳಬೇಕು. ಅಶಾಂತಿ ದೂರ ಮಾಡಿ ಶಾಂತಿಯಿಂದ ಜೀವನ ಸಾಗಿಸುವತ್ತ ಪ್ರಯತ್ನಿಸಬೇಕು. ತಾವೇ ಅಶಾಂತಿ ನಿಯಂತ್ರಿಸಬೇಕು ಎಂಬ ಮನೋಭಾವನೆ ಜನರಲ್ಲಿ ಮೂಡಬೇಕು ಎಂದು ಹೇಳಿದರು.

ಉಗ್ರರಂತೆ ಕಾಣ್ತಾರೆ: ಪ್ಯಾಲೆಸ್ತೀನ್‍ನಲ್ಲಿ ಸಾರ್ವಜನಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಬಂದೂಕಿನಿಂದ ಗುಂಡು ಹಾರಿದ ಶಬ್ದ ಕೇಳಿಸಿದರೆ ಗುಂಡು ನನ್ನ ತಲೆಗೇ ಬಿತ್ತು ಎಂದು ಬೆಚ್ಚಿ ಬೀಳುವ ಪರಿಸ್ಥಿತಿ ಇದೆ. ಇತರೆ ದೇಶಗಳಲ್ಲಿ ಪ್ಯಾಲೆಸ್ತೀನ್ ಸಾರ್ವಜನಿಕರನ್ನು ಉಗ್ರರಂತೆ ಕಾಣಲಾಗುತ್ತಿದೆ. ಭಾರತದಲ್ಲಿ ನಾನು ಪ್ಯಾಲೆಸ್ತೀನ್ ಎಂದು ಹೇಳಿದರೆ ಪಾಕಿಸ್ತಾನಿ ಎಂಬಂತೆ ಭಯದಿಂದ ಕಾಣುವಂತಾಗಿದೆ. ಪ್ಯಾಲೆಸ್ತೀನ್ ಹಾಗೂ ಪಾಕಿಸ್ತಾನಿ ಜನ ಹಾಗೂ ಅವರ ಗುಣಗಳಲ್ಲಿನ ವ್ಯತ್ಯಾಸವನ್ನು ಸಾರಲು ಫ್ರೀಡಂ ಥಿಯೇಟರ್ ಸದಸ್ಯರು ಇಚ್ಛಿಸಿದ್ದೇವೆ ಎಂದರು.

ಜನ ನಾಟ್ಯ ಮಂಚ್‍ನ ಸುಧನ್ವ ದೇಶಪಾಂಡೆ ಮಾತನಾಡಿ, ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಬ್ಬಾಳಿಕೆಯನ್ನು ವಿಶ್ವದ ಎಲ್ಲ ರಾಷ್ಟ್ರಗಳು ಖಂಡಿಸಬೇಕು. ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ
ನ್ಯಾಯಾಲಯದ ಮುಂದೆ ತಂದು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ `ರೋಷದ ಬಣ್ಣಗಳು' ಕವನ ಸಂಕಲನ ಮತ್ತು ಪ್ಯಾಲೆಸ್ತೀನಿನ ಪ್ರಶ್ನೆಗಳು ನಿಮಗೆ ತಿಳಿದಿರಲಿ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

SCROLL FOR NEXT