-ಚಿಕ್ಕಪ್ಪನಹಳ್ಳಿ ಷಣ್ಮುಖ
ಬಾಗಲಕೋಟೆ: ನೀರಾವರಿ, ರೈಲ್ವೆ ಮುಂತಾದ ಯೋಜನೆಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ನೀಡಲಾಗುವ ಪರಿಹಾರ ಇನ್ನು ಮುಂದೆ ನೇರವಾಗಿ ಅವರ ಖಾತೆಗೆ ಜಮೆ ಆಗಲಿದೆ. ಈ ಮೊದಲು ರೈತರಿಂದ ಪವರ್ ಆಫ್ ಅಟಾರ್ನಿ ಪಡೆದುಕೊಳ್ಳುತ್ತಿದ್ದ ವಕೀಲರಿಗೆ ಚೆಕ್ ಸ್ವೀಕರಿಸುವ ಅವಕಾಶವಿತ್ತು. ಆದರೆ ಹೊಸ ಭೂ ಸ್ವಾಧೀನ ಕಾಯ್ದೆಯಿಂದ ಪಾರದರ್ಶಕತೆ ಮಾಡಲಾಗಿದೆ.
ಭೂ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರೈತರ ಬ್ಯಾಂಕ್ ಖಾತೆ ಮಾಹಿತಿ ಪಡೆಯಲಾಗುತ್ತದೆ. ಇದಲ್ಲದೇ ಪಾನ್ ಕಾರ್ಡ್ ಕೂಡಾ ಕಡ್ಡಾಯ ಮಾಡಲಾಗಿದೆ. ರೈತರ ಖಾತೆಗೆ ಹಣ ವರ್ಗಾಯಿಸುವಾಗ ಪಾನ್ ಸಂಖ್ಯೆ ನಮೂದು ಮಾಡಲಾಗುತ್ತದೆ. ರೈಲ್ವೆ, ನೀರಾವರಿ, ಕಾಲುವೆ, ಕೆರೆಗಳಿಗೆ ನೀರು ತುಂಬಿಸುವುದೂ ಸೇರಿದಂತೆ ವಿವಿಧ ಯೋಜನೆಗಳಿಗೆ ರಾಜ್ಯದಲ್ಲಿ ಸರಿಸುಮಾರು ಎರಡು ಲಕ್ಷ ಎಕರೆಯಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 1.10 ಲಕ್ಷ ಎಕರೆಯಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಹಾಗಾಗಿ ಹೊಸ ಕಾಯ್ದೆ ಅನುಷ್ಠಾನಕ್ಕಾಗಿ ರಾಜ್ಯ ಆಯುಕ್ತರ ಹುದ್ದೆ ಸೃಷ್ಟಿಸಲಾಗಿದ್ದು, ಅದರ ಜವಾಬ್ದಾರಿಯನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಆಯುಕ್ತ ಶಿವಯೋಗಿ ಕಳಸದ ಅವರಿಗೆ ವಹಿಸಿಕೊಡಲಾಗಿದೆ.
ಪ್ರತ್ಯೇಕ ನ್ಯಾಯಾಲಯ: ಈ ಮೊದಲು ಭೂ ಸ್ವಾಧೀನದ ಪ್ರಕರಣಗಳ ಇತ್ಯರ್ಥಕ್ಕೆ ಸಿವಿಲ್ ನ್ಯಾಯಾಲಗಳ ಮೊರೆ ಹೋಗಬೇಕಿತ್ತು. ಆದರೆ ಈಗ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಉದ್ದೇಶ ಇದೆ. ಡಿವಿಜನ್ಗೆ ಒಂದರಂತೆ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಲಿವೆ.
ಗುಂಪು ಮನೆಗಳು
ಮುಳುಗಡೆಯಾದ ಪ್ರದೇಶ ಇಲ್ಲವೇ ಭೂ ಸ್ವಾಧೀನವಾದ ಪ್ರದೇಶದ ಜನರಿಗೆ ಮತ್ತೊಂದು ಕಡೆ ಭೂಮಿ ಕೊಡುತ್ತಾ ಹೋದರೆ ಭವಿಷ್ಯದಲ್ಲಿ ಭೂಮಿಯೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಆದಷ್ಟು ಪರಿಹಾರದ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ನಗರ ಪ್ರದೇಶದ ಜನರು ಸಂತ್ರಸ್ತರಾದರೆ ಅವರಿಗೆ ಹುಡ್ಕೋ ಇಲ್ಲವೇ ಇತರೆ ವಸತಿ ನಿರ್ಮಾಣದ ಸಂಸ್ಥೆಗಳ ನೆರವು ಪಡೆದು ಅಪಾರ್ಟ್ಮೆಂಟ್ ಕಟ್ಟಿಸುವ ಬಗ್ಗೆ ಚಿಂತನೆ ಇದೆ. ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಅಪಾರ್ಟ್ಮೆಂಟ್ ಕಟ್ಟಿಕೊಡುವಂತೆ ಹುಡ್ಕೋಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಯುಕ್ತ ಶಿವಯೋಗಿ ಕಳಸದ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿಗೆ ಸರಿಸುಮಾರು 1000 ಕೋಟಿ ಬೇಕಾಗುತ್ತದೆ. ರಾಜ್ಯದ ಎರಡು ಲಕ್ಷ ಎಕರೆ ಪ್ರದೇಶ ಭೂ ಸ್ವಾಧೀನಕ್ಕೆ 4(1) ನೋಟಿಸ್ ಜಾರಿ ಮಾಡಲಾಗಿದೆ.
-ಶಿವಯೋಗಿ ಕಳಸದ, ರಾಜ್ಯ ಆಯುಕ್ತರು ಭೂ ಸ್ವಾಧೀನ.