ಕನ್ನಡಪ್ರಭ ವಾರ್ತೆ, ಕಂಪ್ಲಿ, ಆ. 6
ಬುಡಕಟ್ಟುಗಳ ಜನ ಜಾಗೃತಿಗಾಗಿ ಮಸೂರಿನ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಆ. 8, 9ರಂದು ವಿಶ್ವ ಆದಿವಾಸಿ ದಿನಾಚರಣೆ, ಬುಡಕಟ್ಟು ಕಲಾಮೇಳ, ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಎಲ್ಲ ಬುಡಕಟ್ಟುಗಳ ಜನತೆ ತಮ್ಮ ಪಾರಂಪರಿಕ ಚಹರೆಯಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು ವಿನಂತಿಸಿದ್ದಾರೆ.
ಅವರು ಇಲ್ಲಿನ ಶಿಕಾರಿ ಕಾಲನಿಯ ಶ್ರೀ ತುಳಜಾಭವಾನಿ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಬಳ್ಳಾರಿ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡಿದ್ದ ಬುಡಕಟ್ಟು ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಪುರಸಭೆ ಸದಸ್ಯ ಸಣ್ಣ ಹುಲುಗಪ್ಪ ಮಾತನಾಡಿ, ರಾಜ್ಯ ಸರ್ಕಾರ ಹಿಂದುಳಿದ ವರ್ಗದವರಿಗಾಗಿ ರು. 50 ಕೋಟಿ ಮಂಜೂರು ಮಾಡಿದೆ. ಆದರೆ, ಈ ಹಣ ನಿಜವಾದ ಬುಡಕಟ್ಟುಗಳ ಜನತೆಗೆ ತಲುಪುತ್ತಿಲ್ಲ. ಸರ್ಕಾರ ಮೂಲ ಬುಡಕಟ್ಟುಗಳ ಸಮೀಕ್ಷೆ ನಡೆಸಿ, ಅವರ ಜನಗಣತಿ ಮಾಡಿ, ಅವರಿಗೆ ಮೂಲಭೂತ ಸೌಲಭ್ಯ ಒದಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘ ಅಧ್ಯಕ್ಷ ಸಣ್ಣ ಮಾರೆಪ್ಪ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 1.20 ಲಕ್ಷ ಅಲೆಮಾರಿಗಳಿದ್ದಾರೆ. ಇವರಲ್ಲಿ 6 ಸಾವಿರ ಅಲೆಮಾರಿಗಳಿಗೆ ಇವತ್ತಿಗೂ ಪಡಿತರ ಚೀಟಿ ಸಿಕ್ಕಿಲ್ಲ, ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ ಎಂದು ಹೇಳಿದರು.
ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಕೆ. ರಾಮು ಮಾತನಾಡಿ, ಆದಿವಾಸಿಗಳ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಅಭಿವೃದ್ಧಿ, ಸಂಸ್ಕೃತಿ ರಕ್ಷಣೆಗಾಗಿ ಸರ್ಕಾರ ಮುಂದಾಗಬೇಕು ಎಂದು ಕೋರಿದರು.
ಹಿರಿಯ ಬುಡಕಟ್ಟು ಸದಸ್ಯ ಜಿ. ಮಾಧವರಾವು, ಬಳ್ಳಾರಿ ಜಿಲ್ಲಾ ಹಕ್ಕಿ ಪಿಕ್ಕಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಪಿ. ಶ್ರೀಕಾಂತ್, ಕಾರ್ಯದರ್ಶಿ ಪದ್ಮನಾಭ, ಸಿಂಧೋಳ್ ಸಮಾಜ ಸಂಘ ಅಧ್ಯಕ್ಷ ರಾವುಲ್ ನಾಗಪ್ಪ ಉಪಸ್ಥಿತರಿದ್ದರು. ಅಲೆಮಾರಿ ಸಮಾಜದವರು ಪಾಲ್ಗೊಂಡಿದ್ದರು.