ಹೊನ್ನಾಳಿ: ಉತ್ತಮ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಬೇರೆಯವರು ಹೇಳುವುದಕ್ಕಿಂತ ಅವರ ಆತ್ಮವೇ ಸಂತೋಷದಿಂದ ಸಂತೃಪ್ತಿಗೊಳ್ಳುತ್ತದೆ. ಇದುವೇ ಸುಂದರ ಜೀವನ ಎಂದು ಶ್ರೀ ಚನ್ನಪ್ಪಸ್ವಾಮಿ ವಿದ್ಯಾಸಂಸ್ಥೆಯ ಅಡಳಿತಾಧಿಕಾರಿ ಡಾ. ಎಚ್. ಜಯಪ್ಪ ಹೇಳಿದರು. ಹಿರೇಮಠದ ಶ್ರೀ ಜಗದ್ಗುರು ಜಡೆಯ ಶಂಕರ ಪ್ರೌಢ ಶಾಲೆಯಲ್ಲಿ ಸುದೀರ್ಘವಾಗಿ ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ಗುರುವಾರ ವಯೋನಿವೃತ್ತಿಗೊಂಡ ಶಾಲೆಯ ಮುಖ್ಯ ಶಿಕ್ಷಕ ಎಂ.ಪಿ.ಎಂ ಚನ್ನಬಸಯ್ಯ ಅವರಿಗೆ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿದ್ದ ಕಾಮಿನಾಳು ಹಿರೇಮಠದ ಸಿದ್ದಪಾದ ಶಿವಾಚಾರ್ಯ ಮಹಾಸ್ವಾಮೀಜಿ ಚನ್ನಬಸಯ್ಯರನ್ನು ಸನ್ಮಾನಿಸಿ ಮಾತನಾಡಿದರು. ತನಿವೃತ್ತ ಮುಖ್ಯ ಶಿಕ್ಷಕ ಎಚ್.ಆರ್. ಬಸವರಾಜಪ್ಪ, ಮುಖ್ಯ ಶಿಕ್ಷಕ ಎಂ.ಪಿ.ಎಂ. ವಿಜಯಾನಂದ ಕುಮಾರ ಸ್ವಾಮಿ, ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲಾಧಿಕಾರಿ ನಿರಂಜನಮೂರ್ತಿ, ಜಿ.ಎಚ್. ರಾಜು, ವಿದ್ಯಾಸಂಸ್ಥೆಯ ನಿರ್ದೇಶಕರುಗಳಾದ ಮಹಾಲಿಂಗಪ್ಪ, ಪಿ.ಎಂ. ಸಿದ್ದಯ್ಯ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಮಾದಪ್ಪ ಅವರು ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಪ್ರಭಾರಿ ಮುಖ್ಯ ಶಿಕ್ಷಕ ಲಲಾಟಾಕ್ಷಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಹೇಶ್ವರಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
'ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ'
ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ದಾವಣಗೆರೆ ಜಿಲ್ಲೆಯ ಮೊದಲ ಮಹಿಳಾ ಉಪ ನಿರ್ದೇಶಕರಾಗಿ ಎಚ್.ಎಂ. ಪ್ರೇಮಾ ನಗರದ ಡಿಡಿಪಿಐ ಕಚೇರಿಯಲ್ಲಿ ಸೋಮವಾರ ಅಧಿಕಾರ ವಹಿಸಿಕೊಂಡರು.
ಡಿಡಿಪಿಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಡಿ.ಕೆ. ಶಿವಕುಮಾರ ಮುಂಬಡ್ತಿ ಪಡೆದು ಚಿತ್ರದುರ್ಗಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಗರದ ಡಯಟ್ ಕಾಲೇಜು ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಚ್.ಎಂ. ಪ್ರೇಮಾ ಅಧಿಕಾರ ಸ್ವೀಕರಿಸಿದರು.
ಕಚೇರಿ ಅಧೀಕ್ಷಕ ಮಹದೇವಪ್ಪ, ಶಿಕ್ಷಣಾಧಿಕಾರಿಗಳಾದ ಬಿ.ಸಿ. ಸಿದ್ದಪ್ಪ, ಬಿ. ಆರ್. ಬಸವರಾಜಪ್ಪ, ಲಿಂಗರಾಜ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ನೂತನ ಡಿಡಿಪಿಐ ಪ್ರೇಮಾ ಅವರಿಗೆ ಅಭಿನಂದಿಸಿ, ಶುಭಾರೈಸಿದರು.
ಸುಧಾರಣೆಗೆ ಒತ್ತು: ಅಧಿಕಾರಿ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಎಚ್.ಎಂ. ಪ್ರೇಮಾ, ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಸಲ್ಲಿಸುವೆ. ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಸುಧಾರಣೆಗೆ ಒತ್ತು ನೀಡಲಾಗುವುದು. ಶಿಕ್ಷಕರೂ ಸಹ ಬದ್ಧತೆಯಿಂದ ಕಾರ್ಯ ನಿರ್ವಹಿಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆಯು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.
ಬಣಜಿಗ ಸಮಾಜಕ್ಕೆ ಪ್ರತ್ಯೇಕ ಗುರುಪೀಠ ಅವಶ್ಯಕತೆಯಿಲ್ಲ: ಅಥಣಿ ವೀರಣ್ಣ
ನ್ಯಾಮತಿ: ಬಣಜಿಗ ಸಮಾಜಕ್ಕೆ ಪ್ರತ್ಯೇಕ ಗುರುಪೀಠದ ಅವಶ್ಯಕತೆಯಿಲ್ಲ. ವೀರಶೈವ ಸಮಾಜದ ಉನ್ನತಿಗೆ ಪ್ರೋತ್ಸಾಹದಾಯಕವಾಗಿರಬೇಕು. ಒಳಪಂಗಡವೆಂಬ ದುರ್ನೀತಿ ಸಲ್ಲದು. ಬಣಜಿಗರ ಸಹಬಾಳ್ವೆಗೆ ಒಗ್ಗಟ್ಟು ಪ್ರತಿಧ್ವನಿಸ ಬೇಕಾಗಿದೆಯೆಂದು ದಾವಣಗೆರೆಯ ಅಥಣಿ ವೀರಣ್ಣ ತಿಳಿಸಿದರು.
ಇಲ್ಲಿನ ಮಹಂತೇಶ್ವರ ವೀರಶೈವ ಕಲ್ಯಾಣಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದ ಹೊನ್ನಾಳಿ ತಾಲೂಕು ಬಣಜಿಗ ಮಹಿಳಾ ಕ್ಷೇಮಾಭಿವೃದ್ಧಿ ಸೌಹಾರ್ದ ಸಹಕಾರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೌಹಾರ್ದ ಸಹಕಾರ ಸಂಘ ಉದ್ಘಾಟಿಸಿದ ರಾಜ್ಯ ಬಣಜಿಗ ಸಮಾಜ ಅಧ್ಯಕ್ಷ ಸಿದ್ದಪ್ಪ ಎಂ.ಸಕ್ರಿ ಬಿಜಾಪುರ ಮಾತನಾಡಿ ಬಣಜಿಗರ ಮುಖ್ಯ ಕಸುಬು ವ್ಯಾಪಾರ ಎಂದ ಅವರು, ರಾಜ್ಯದಲ್ಲಿಯೇ ಪ್ರಥಮವಾಗಿ ನ್ಯಾಮತಿಯಲ್ಲಿ ತಾಲೂಕು ಮಟ್ಟದ ಬಣಜಿಗ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿರುವುದು ಆದರ್ಶವಾಗಿದೆ. ಮಹಿಳೆಯರಲ್ಲಿನ ಸಂಘಟನಾ ಶಕ್ತಿ ಇಮ್ಮಡಿಯಾಗಲೆಂದು ಆಶಿಸಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೊನ್ನಾಳಿ ಹಿರೇಕಲ್ಮಠ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಲ್ಲಾ ಸಮಾಜವರ್ಗದವರೂ ಅಪ್ಪಿಕೊಳ್ಳುವ ಸಮಾಜ ಬಣಜಿಗ ಸಮಾಜವಾಗಿದೆ ಎಂದರು.
ಪ್ರಾಮಾಣಿಕತೆ, ಪ್ರಯತ್ನ, ಪ್ರಚಾರ ಈ ಮೂರು ಸಹಕಾರ ಸಂಘದ ಬಲವರ್ಧನೆಗೆ ಸಹಕಾರಿ ಎಂದ ಅವರು, ಸಂಘಗಳಲ್ಲಿ ಸಾಲ ಪಡೆದವರು ಸಾಲ ಮರು ಪಾವತಿಯಲ್ಲಿ ಪ್ರಾಮಾಣಿಕತೆ ಇರಲೆಂದು ಶ್ರೀಗಳು ನುಡಿದರು.
ದಾವಣಗೆರೆ ಜಿಲ್ಲಾ ಬಣಜಿಗ ಸಮಾಜ ಅಧ್ಯಕ್ಷ ಎಚ್.ಆರ್.ಸಿದ್ದಲಿಂಗೇಶ್, ಶಿವಕುಮಾರ ದೇವರಮನಿ ಹಾಗೂ ಬಣಜಿಗ ಮುಖ್ಯಸ್ಥರು ಉಪಸ್ಥಿತರಿದ್ದರು.
ತಾಲೂಕು ಬಣಜಿಗ ಸಮಾಜದಿಂದ ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ 2013-14ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಸೌಭಾಗ್ಯಮ್ಮ ರವಿ ತೊಂಟದಾರ್ಯ ಅಧ್ಯಕ್ಷತೆ ವಹಿಸಿದ್ದರು.