ಧಾರವಾಡ: ಕವಿರಾಜಮಾರ್ಗ ಕೃತಿ ಮೂಲತಃ ದಂಡಿಯ ಕಾವ್ಯದರ್ಶನದ ಅನುವಾದ ಎಂಬ ಮಾತಿದ್ದರೂ ವ್ಯಾಕರಣ, ಅಲಂಕಾರ, ಛಂದಸ್ಸುಗಳ ಮೌಲಿಕ ನಿಧಿಗಳೊಂದಿಗೆ ಇದು ಕನ್ನಡ ಕಾವ್ಯ ಮೀಮಾಂಸೆಯ ಉತ್ಕೃಷ್ಟ ಗ್ರಂಥ ಎನಿಸಿಕೊಂಡಿದೆ ಎಂದು ಜೆಎಸ್ಎಸ್ ಕಾಲೇಜು ಪ್ರಾಧ್ಯಾಪಕ ಡಾ.ಜಿ. ಜಿನದತ್ತ ಹಡಗಲಿ ಹೇಳಿದರು.
ಇಲ್ಲಿನ ಅನ್ವೇಷಣ ಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕನ್ನಡದ ಆದ್ಯಕೃತಿ ಕವಿರಾಜಮಾರ್ಗ ಕುರಿತ ಮಾಸಿಕ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಕ್ರಿಸ್ತಪೂರ್ವ ಭಾಷೆಗಳಲ್ಲಿ ಒಂದಾಗಿರುವ ಕನ್ನಡದ ಕುರಿತು ಗ್ರೀಕ್ ಪ್ರವಾಸಿ ಟಾಲೇಮಿ ಮತ್ತು ಹಾಲರಾಜನ ಗಾಥಾ ಸಪ್ತಶತಿ ಗ್ರಂಥದಲ್ಲೂ ಹಲವಾರು ಕನ್ನಡ ಶಬ್ದಗಳು ಬಳಕೆಯಾಗಿದೆ ಎಂದು ಹೇಳಿದರು.
ಕವಿರಾಜ ಮಾರ್ಗ ಮೂಲತಃ ಅಲಂಕಾರ ಗ್ರಂಥ ಎನ್ನಿಸಿಕೊಂಡರೂ ಕೃತಿಯಲ್ಲಿನ ನಾಡು, ನುಡಿ, ಸಂಸ್ಕೃತಿ, ರಾಜಕೀಯ, ಸಾಮಾಜಿಕ ಮುಂತಾದ ವಿಶಾಲ ವ್ಯಾಪ್ತಿಯ ನೋಟಗಳು, ಸ್ವತಂತ್ರ ಚಿಂತನೆಗಳು ಈ ಕೃತಿಯನ್ನು ಕನ್ನಡದ ಅಪ್ರತಿಮ ಆಕರ ಗ್ರಂಥವನ್ನಾಗಿಸಿದೆ ಎಂದು ಹಡಗಲಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎಂ. ಹೆಗಡೆ ಮಾತನಾಡಿ, ಜಾಗತೀಕರಣ ಮತ್ತು ಬಹು ಮಾಧ್ಯಮಗಳ ಈ ಕಾಲದಲ್ಲಿ ಕನ್ನಡದ ಸ್ಥಿತಿ ಗತಿ ನೋಡಿದಾಗ 9ನೇ ಶತಮಾನದಷ್ಟು ಹಿಂದೆ ಬೆಳಗಿದ ಕವಿರಾಜಮಾರ್ಗ ಸರ್ವಧರ್ಮ ಸಮನ್ವಯತೆ, ಪರಮತ ಸಹಿಷ್ಣುತೆ, ಅಂದಿನ ಕನ್ನಡ ನಾಡಿನ ಜನರ ಜಾಣ್ಮೆ, ಸಂಸ್ಕೃತಿ ಸಂಪನ್ನತೆ, ವಿವೇಕಗಳೆಲ್ಲ ಎಲ್ಲಿ ಹೋದವು ಎಂದು ಆಶ್ಚರ್ಯವಾಗುತ್ತದೆ ಎಂದರು.
ಯುವ ಗಾಯಕಿ ದುರ್ಗಾಭಟ್ ಸಂಗೀತ ಪ್ರಸ್ತುತಪಡಿಸಿದರು. ಗಜಾನನ ಹೆಗಡೆ ತಬಲಾ ಸಾಥ್ ನೀಡಿದರು ಪ್ರೊ.ದುಷ್ಯಂತ ನಾಡಗೌಡ, ರಾಮಚಂದ್ರ ಧೋಂಗಡೆ, ಎ.ಸಿ. ಮುಂಡರಗಿ, ಡಾ. ಶಿವಾನಂದ ಗಾಳಿ, ಜಿ.ಸಿ. ತಲ್ಲೂರ, ಹರ್ಷ ಡಂಬಳ, ಸದಾನಂದ ಭಟ್ಕಳ, ಜಿ.ಸಿ. ಕುಲಕರ್ಣಿ, ಬಿ.ಐ. ಈಳಿಗೇರ, ವಿ.ಜಿ. ತಿಗರಿ, ರಾಜೀವ ಪಾಟೀಲ ಕುಲಕರ್ಣಿ, ಎಂ.ವಿ. ಹೊಸಮನಿ, ಡಾ. ಶಾರದಾ ಭಟ್, ಆರತಿ ದೇವಶಿಖಾಮಣಿ, ನಾಗರತ್ನಾ ದೇಸಾಯಿ ಇದ್ದರು. ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು.