ಗದಗ: ಜಿಲ್ಲೆಯಲ್ಲಿ ರಾಮಗಡ್ ಮಿನರಲ್ಸ್ ಮೈನ್ಸ್ (ಬಲ್ದೋಟಾ) ಕಂಪನಿ ನಡೆಸುತ್ತಿರುವ ಬಂಗಾರದ ಗಣಿಗಾರಿಕೆ ಕುರಿತು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
ಗುರುವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಗದಗ ಜಿಲ್ಲೆಯ ಅತ್ತಿಕಟ್ಟಿ ಗ್ರಾಮದಲ್ಲಿ ಬಂಗಾರದ ಗಣಿಗಾರಿಕೆ ನಡೆಯುತ್ತಿದೆ ಎಂಬ ಕುರಿತಾದ ವರದಿಯನ್ನು 'ಕನ್ನಡಪ್ರಭ'ದಲ್ಲಿ ಗಮನಿಸಿದ್ದೇನೆ. ಈ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ನಮ್ಮವರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಗಣಿಗಾರಿಕೆ ವಿಷಯವಾಗಿ ಕೆಲ ಪ್ರಮುಖ ದಾಖಲೆಗಳು ಲಭ್ಯವಾಗಿವೆ ಎಂದರು.
ದಾಖಲೆಗಳ ಬಗ್ಗೆ ಪ್ರಶ್ನಿಸಿದಾಗ, ಈಗಲೇ ಬೇಡ. ಕೆಲವು ಪೂರಕ ದಾಖಲೆಗಳು ಕೆಲವೇ ದಿನಗಳಲ್ಲಿ ನಮ್ಮ ಕೈಸೇರಲಿದ್ದು, ಆಮೇಲೆ ಮಾಧ್ಯಮಗಳಿಗೆ ವಿವರಿಸಲಾಗುವುದು. ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟಕ್ಕೂ ಚಿಂತನೆ ನಡೆಸಲಾಗಿದೆ. ಕಪ್ಪತ್ತಗುಡ್ಡ ಭಾಗಕ್ಕೆ ಹೊಂದಿಕೊಂಡಿರುವ ಕೆಲ ಗ್ರಾಮಗಳ ರೈತರ ಜಮೀನನ್ನು ಕಂಪನಿಗಳು ಖರೀದಿಸಿರುವ ಹಾಗೂ ಅಕ್ರಮಗಳ ಕುರಿತು ಗ್ರಾಮಸ್ಥರ ಹೋರಾಟದ ಬಗ್ಗೆಯೂ ಮಾಹಿತಿ ಇದೆ ಎಂದರು.