ಗದಗ: ಮಕ್ಕಳು ಕಷ್ಟಪಟ್ಟು ಅಭ್ಯಾಸಮಾಡದೇ ವಿಷಯ ಅರಿತು ಇಷ್ಟಪಟ್ಟು ಅಭ್ಯಾಸ ಮಾಡಿ ಅಬ್ದುಲ್ ಕಲಾಂ, ಡಾ. ರಾಧಾಕೃಷ್ಣನ್ರಂತೆ ದೇಶ ಮುನ್ನಡೆಸುವಂತಹ ನಾಯಕರಾಗುವಂತೆ ಕೂಡಲಸಂಗಮದ ಲಿಂಗಾಯುತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ನರಸಾಪುರ-ಬೆಟಗೇರಿಯ ರಂಗಾವಧೂತರ ಮಠದ ಹತ್ತಿರ ಇರುವ ಅಮರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜ ಬಾಂಧವರಿಂದ ಏರ್ಪಡಿಸಿದ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಲಿಂಗಾಯತ ವಿದ್ಯಾಸಂಸ್ಥೆಗಳು ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿರುವುದರಿಂದ ಇಂದು ಶಿಕ್ಷಣವಂತರು ಹೆಚ್ಚಾಗಿದ್ದಾರೆ. ಬಡತನ, ಶೋಷಣೆಯಿಂದ ಹೊರಬರಲು ಒಕ್ಕಲುತನ ಸುಧಾರಣೆಗೆ ಶಿಕ್ಷಣ ಅವಶ್ಯವಾಗಿದ್ದು, ಉತ್ತಮ ಶಿಕ್ಷಣದಿಂದ ಸಮಾಜದ ಮಕ್ಕಳು ಪ್ರತಿಭೆ ತೋರುತ್ತಿರುವುದು ಸಂತಸದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಶೇ. 70 ಕ್ಕಿಂತ ಹೆಚ್ಚು ಅಂಕಪಡೆದ ಎಸ್ಸೆಸ್ಸೆಲ್ಸಿ 20 ವಿದ್ಯಾರ್ಥಿಗಳು ಮತ್ತು 5 ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿಪ ಸದಸ್ಯರಾಗಿ ಆಯ್ಕೆಯಾದ ಎಸ್.ವಿ. ಸಂಕನೂರ, ಕೆ.ಎಂ.ಎಫ್. ಅಧ್ಯಕ್ಷ ನೀಲಕಂಠ ಅಸೂಟಿ, ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಗದಗ ಎಪಿಎಂಸಿಗೆ ನಾಮನಿರ್ದೇಶನ ಹೊಂದಿದ ಅಜ್ಜನಗೌಡ ಹಿರೇಮನಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬಿ.ಎಸ್. ಮಾನೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಟಗೇರಿ ಘಟಕದ ಉಪಾಧ್ಯಕ್ಷ ಬಸವರಾಜ ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರಭಣ್ಣ ಹುಣಸಿಕಟ್ಟಿ, ಎಂ.ಬಸಪ್ಪ, ಎಂ.ಎಸ್. ಚಿನ್ನೂರ, ಶಶಿಧರ ದಿಂಡೂರ, ಕಮತರ, ಮಹೇಶ ಕರಿಬಿಷ್ಠಿ, ಕಲ್ಯಾಣಪ್ಪ ಹೋಳಿ, ಪಾಟೀಲ ಉಪಸ್ಥಿತರಿದ್ದರು. ಶಾಂತಮ್ಮ ಹೊಂಬಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಂ.ಎಸ್. ಮಲ್ಲಾಪುರ ಸ್ವಾಗತಿಸಿದರು. ಸಿ.ಎಂ. ಮಾರನಬಸರಿ ನಿರೂಪಿಸಿದರು. ರಾಜಶೇಖರ ಕರಡಿಯವರು ವಂದಿಸಿದರು.